ಕಾರ್ಕಳ; ಕೊರೊನಾ, ಪ್ರಾಕೃತಿಕ ಅವಘಡ ಸಂಭವಿಸಿ ಕ್ಷೇತ್ರದ ಜನ ಸಂಕಷ್ಟಕ್ಕೀಡಾಗಿದ್ದ ಸಂದರ್ಭದಲ್ಲಿ ಗುಹೆ ಸೇರಿಕೊಂಡಿದ್ದ ಕಾಂಗ್ರೆಸ್ ಈಗ ಚುನಾವಣೆ ವೇಳೆ ಯಾವ ಮುಖ ಇಟ್ಟುಕೊಂಡು ಜನರ ಬಳಿಗೆ ಹೋಗಿ ಮತ ಯಾಚಿಸುತ್ತಿದೆ? 5 ವರ್ಷಕ್ಕೊಮ್ಮೆ ಜನರ ಮನೆಬಾಗಿಲಿಗೆ ಬರುವ ಕಾಂಗ್ರೆಸ್ಸನ್ನು ಕ್ಷೇತ್ರದ ಜನ ತಿರಸ್ಕರಿಸಬೇಕು ಎಂದು ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ ಸುನಿಲ್ ಕುಮಾರ್ ಹೇಳಿದರು.
ಅವರು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಹಿರ್ಗಾನದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು. ಜನರ ಕಷ್ಟ-ಕಾರ್ಪಣ್ಯ ನೋವುಗಳಲ್ಲಿ ಬಿಜೆಪಿ ಜನರ ಜತೆ ನಿರಂತರವಾಗಿ ನಿಂತಿದೆ. ಜನಸಾಮಾನ್ಯರು ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರಿದ್ದ ಸ್ಥಳಕ್ಕೆ ತೆರಳಿ ಸಮಸ್ಯೆ ಆಲಿಸಿ ಅವರ ಕಷ್ಟಗಳನ್ನು ಪರಿಹರಿಸಿದ್ದೇವೆ. ಪ್ರತಿ ಹಳ್ಳಿಯ ಕಟ್ಟ ಕಡೆಯ ನಿವಾಸಿಯ ಕುಟುಂಬಕ್ಕೆ ಬಿಜೆಪಿ ಸ್ಪಂದಿಸಿದೆ. ಎಲ್ಲಾ ಸಮಯಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಸಾಮಾನ್ಯ ಆದರೆ ಕೊರೊನಾ ಬಂದು ಜನ ಸಂಕಷ್ಟಕ್ಕೀಡಾದಾಗ ಅವರ ಬಳಿ ತೆರಳಿ ವೈದ್ಯಕೀಯ ಸೇವೆ, ಆರೋಗ್ಯ ತಪಾಸಣೆ, ಕಿಟ್ ನೀಡಿರುವುದಲ್ಲದೆ ನಾಗರಿಕರ ಆರೋಗ್ಯ, ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಕ್ಷೇತ್ರದ ಜನರ ಕಾಳಜಿ ವಹಿಸಿದ್ದೇವೆ ಎಂದರು.
ಅಷ್ಟೇ ಅಲ್ಲದೆ ಮುಂಬಯಿ, ಪೂನಾದಲ್ಲಿರುವ ನಮ್ಮ ಸ್ನೇಹಿತರು ಮರಳಿ ಕ್ಷೇತ್ರಕ್ಕೆ ಬಂದಾಗ ಅವರಿಗೆ ಯಾವುದೇ ತೊಂದರೆ ಆಗದಂತೆ ಕ್ವಾರಂಟೈನ್ ಸ್ಥಾಪಿಸಿ, ವ್ಯವಸ್ಥೆ ಕಲ್ಲಿಸಿದ್ದೇವೆ. ಆಗ ಇದೇ ಕಾಂಗ್ರೆಸ್ಸಿಗರು ಎಲ್ಲಿ ಅಡಗಿ ಕುಳಿತಿದ್ದರು? ಎಂದು ಪ್ರಶ್ನಿಸಿರುವ ಅವರು 5 ವರುಷ ಜನಸಾಮಾನ್ಯರ ಕಡೆ ತಿರುಗಿಯು ನೋಡದವರು ಈಗ ಚುನಾವಣೆ ಹೊತ್ತಲ್ಲಿ ನಾನಾ ಭರವಸೆ, ಗ್ಯಾರಂಟಿ ಕಾರ್ಡ್ಗಳನ್ನು ಹಿಡಿದುಕೊಂಡು ವಿವಿಧ ಮುಖವಾಡ ಹೊತ್ತು ಜನರ ಮನೆ ಬಾಗಿಲಿಗೆ ಬಂದು ಭರವಸೆಗಳನ್ನು ನೀಡುತ್ತಿದ್ದಾರೆ. ಇಷ್ಟು ದಿನಗಳಲ್ಲಿ ಒಂದು ಬಾರಿಯೂ ಕ್ಷೇತ್ರದ ಕಡೆ ತಿರುಗಿ ನೋಡದವರಿಗೆ ಈಗ ಜನರ ನೆನಪಾಗಿರುವುದು ಹಾಸ್ಯಾಸ್ಪದ ಎಂದರು.
ಕ್ಷೇತ್ರದ ಜನ ಸಮಸ್ಯೆಗೆ ಒಳಗಾದಾಗ, ಮೂಲಭೂತ ಸೌಕರ್ಯ ಕೇಳಿಕೊಂಡು ಬಂದಾಗ ಯಾವುದೇ ಜಾತಿ, ಧರ್ಮ ಎಂಬ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನ ನ್ಯಾಯ ನೀಡಿದ್ದೇವೆ. ಇದನ್ನು ಕ್ಷೇತ್ರದ ಮತದಾರರು ಖಂಡಿತ ಅರ್ಥ ಮಾಡಿಕೊಳ್ಳುತ್ತಾರೆ. ಈ ಚುನಾವಣೆಯಲ್ಲಿ ಅಪಪ್ರಚಾರ ನಡೆಸುವವರನ್ನು ಹಾಗೂ 5 ವರ್ಷಕ್ಕೊಮ್ಮೆ ಮನೆಗಳಿಗೆ ಬರುವವರನ್ನು ತಿರಸ್ಕರಿಸಿ. ಜನರ ಜತೆಗೆ ಸದಾಕಾಲ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬಿಜೆಪಿ ಶಾಸಕನಾದ ನನ್ನನ್ನು ಬೆಂಬಲಿಸಿ ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ್ ಶೆಟ್ಟಿ, ಶಂಭು ಹೆಗ್ಡೆ, ಹರೀಶ್ಚಂದ್ರ ಕುಲಾಲ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.