ಕಾರ್ಕಳ : ಪರಶುರಾಮನ ಪ್ರತಿಮೆ ನಿರ್ಮಾಣದ ಮೂಲಕ ಪುರಾಣಕ್ಕೆ ಹೊಸತೊಂದು ಕುರುಹು ಸಿಕ್ಕಂತಾಗಿದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾವು ಭಾಗ್ಯವಂತರು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಅವರು ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಉಮಿಕಲ್ ಬೆಟ್ಟದ ಮೇಲೆ 33 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು .
ನಾನು ಉದ್ಘಾಟನೆಗೆ ಬಂದಿಲ್ಲ ಪರಶುರಾಮನ ಭಕ್ತನಾಗಿ ಬಂದಿದ್ದೇನೆ . ನನ್ನ ಮನೆಯ ಆರಾಧ್ಯ ದೇವಿ ಎಲ್ಲಮ್ಮ ದೇವಿಯ ಆರಾಧಕ ನಾನು ,ಸವದತ್ತಿಯಲ್ಲಿ ಪರಶುರಾಮ ದೇವಾಲಯದ ಭಕ್ತ. ಈಗಾಗಲೇ ದೇವಾಲಯದ ಜೀರ್ಣೋದ್ಧಾರದ ಶಿಲಾನ್ಯಾಸ ಮಾಡಿ ಬಂದಿದ್ದೇನೆ ಎಂದ ಸಿಎಂ ಪ್ರತಿಮೆಯನ್ನು ಗಮನಿಸಿ ಪರಶುರಾಮ ಇಲ್ಲಿಂದಲೆ ಕೊಡಲಿ ಬಿಸಾಡಿದ್ದೆನೊ ಎಂದು ಭಾಸವಾಗುತ್ತಿದೆ ಎಂದರು.
ಪರಶುರಾಮ ಥೀಮ್ ಪಾರ್ಕ್ ನಿರ್ಮಾಣದಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ . ಅದಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಯಾತ್ರಿಕರಿಗೆ ಅನುಕೂಲ ಕಲ್ಪಿಸಲು ದೇವಾಲಯಗಳ ಮೂಲಕ ಪ್ರವಾಸೋದ್ಯಮ, ಕರಾವಳಿಯ ಪ್ರವಾಸೋದ್ಯಮ , ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಮಾಸ್ಟರ್ ಪ್ಲಾನ್ ಮಾಡುವ ಮೂಲಕ ಆರ್ಥಿಕವಾಗಿ ಬಲಪಡಿಸಲು ಸರಕಾರ ಶಕ್ತವಾಗಿದೆ ಎಂದರು
ತುಳುನಾಡಿನ ಜನರು ಶ್ರಮಜೀವಿಗಳು, ಕೃಷಿ, ಮೀನುಗಾರಿಕೆ ,ಸಣ್ಣ ಪುಟ್ಟ ವ್ಯವಹಾರಗಳಲ್ಲಿ ತೊಡಗಿಕೊಳ್ಳುತಿದ್ದಾರೆ .ಆರ್ಥಿಕತೆ ಬೆಳೆಯಬೇಕಾದರೆ ಕೈಗಾರಿಕರಣ ಹಾಗೂ ಅದಕ್ಕೆ ಪೂರಕವಾದ ರೈಲು, ವಿಮಾನ ನಿಲ್ದಾಣಗಳು, ರಸ್ತೆಗಳು, ಮೂಲ ಸೌಕರ್ಯಗಳು ಬಹುಮುಖ್ಯ ಪಾತ್ರವಹಿಸುತ್ತವೆ.ಕರಾವಳಿಯಲ್ಲಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹಾಗು ಹೂಡಿಕೆಗಾಗಿ ಒಂದೂವರೆ ಲಕ್ಷ ಕೋಟಿ ರೂ. ಬಂಡವಾಳ ಹರಿದು ಬರುತ್ತಿದೆ ಅದನ್ನು ಸಂಪೂಣ ವಾಗಿ ವಿನಿಯೋಗಿಸುವ ಮೂಲಕ ಕರಾವಳಿಯನ್ನು ಆರ್ಥಿಕವಾಗಿ ಬಲಪಡಿಸಬಹುದಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಸಚಿವ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಪ್ರಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ, ಗೇರು ನಿಗಮ ಅದ್ಯಕ್ಷ ಮಣಿರಾಜ್ ಶೆಟ್ಟಿ , ಎಂಎಲ್ಸಿ ರವಿ ಕುಮಾರ್, ಉದಯ್ ಕುಮಾರ್ ಶೆಟ್ಟಿ, ಶಾಸಕ ಲಾಲಜಿ ಮೆಂಡನ್ ,ಕಾಂತಾರ ರಿಷಬ್ ಶೆಟ್ಟಿ , ಶಾಸಕರಾದ ರಘುಪತಿ ಭಟ್, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ , ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚೆನ್ನಪ್ಪ ಶೆಟ್ಟಿ , ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ , ಎಸ್ ಪಿ ಅಕ್ಷಯ್ ಹಾಕೆ ಮಚಿಂದ್ರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಲಾಯಿತು. ಪ್ರಾಂಶುಪಾಲ ಮಂಜುನಾಥ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ದನ್ಯವಾದವಿತ್ತರು