
ಕಾರ್ಕಳ, ಆ.02: ವೈದ್ಯಕೀಯ ಕಾಲೇಜಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನಡೆಸುವ ಅರ್ಹತಾ ಪರೀಕ್ಷೆಯಾದ ನೀಟ್ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆಗೈದು ದೇಶದ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಿಗೆ ಸೇರಿಕೊಳ್ಳಲಿರುವ ಕ್ರಿಯೇಟಿವ್ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಂಮಾನ ಕಾರ್ಯಕ್ರಮ ಕ್ರಿಯೇಟಿವ್ ನ ಸಪ್ತಸ್ವರ ವೇದಿಕೆಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕರಾದ ಅಶ್ವತ್ ಎಸ್ ಎಲ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ನೀಟ್ ಪರೀಕ್ಷೆಯಲ್ಲಿ ಕಠಿಣ ಪ್ರಯತ್ನಪಟ್ಟು ಸಾಧನೆಗೈದಿರುವ ವಿದ್ಯಾರ್ಥಿಗಳನ್ನು ಮತ್ತು ಅವರ ಹೆತ್ತವರನ್ನು ಗೌರವಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ಕ್ರಿಯೇಟಿವ್ ಪ್ರತಿಭಾ ಪರ್ವ ಎಂಬ ವಿನೂತನ ಕಾರ್ಯಕ್ರಮವನ್ನುಹಮ್ಮಿಕೊಂಡಿದ್ದೇವೆ. ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಅನೇಕ ಗೊಂದಲಗಳ ನಡುವೆಯೂ ಸಂಕಟಗಳನ್ನು, ಒತ್ತಡಗಳನ್ನು ದಾಟಿ ಗೆದ್ದು ವಿಶಿಷ್ಟ ಸಾಧನೆ ಗೈದಿರುವ ವಿದ್ಯಾರ್ಥಿಗಳನ್ನು ವಿಶೇಷವಾಗಿ ಗುರುತಿಸಲು ಅತೀವ ಸಂತೋಷವಾಗುತ್ತದೆ. ಕೇವಲ ವಿದ್ಯಾರ್ಥಿಗಳಿಗೆ ಅಂಕ ಗಳಿಕೆ ಮಾತ್ರವಲ್ಲದೇ ಭವಿಷ್ಯತ್ತಿನಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ಕ್ರಿಯೇಟಿವ್ ಸಂಸ್ಥೆ ಸದಾ ಶ್ರಮಿಸುತ್ತಿದೆ ಎಂದರು.
ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ.ಎಸ್. ರವರು, ಕಾರ್ಯಕ್ರಮದ ಕುರಿತು ಇದು ಕೇವಲ ಬಹುಮಾನ ಕೊಡುವ ಕಾರ್ಯಕ್ರಮವಲ್ಲ ವಿದ್ಯಾರ್ಥಿಗಳ ಪರಿಶ್ರಮವನ್ನು, ಪ್ರತಿಭೆಯನ್ನು ಗುರುತಿಸಿ ಗೌರವನ್ನು ಸೂಚಿಸುವ ಕಾರ್ಯಕ್ರಮ ಮತ್ತು ಮುಂದಿನ ವರ್ಷದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಕೊಡುವ ಅರ್ಥಪೂರ್ಣ ಕಾರ್ಯಕ್ರಮವಿದು. ವಿದ್ಯಾರ್ಥಿಗಳ ಈ ಸಾಧನೆಯಲ್ಲಿ ಕೇವಲ ಉಪನ್ಯಾಸಕರು ಮಾತ್ರವಲ್ಲದೆ ನಿಲಯ ಪಾಲಕರ ತ್ಯಾಗ, ಪರಿಶ್ರಮ ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಅಡಗಿದೆ ಎನ್ನುತ್ತಾ ಶಿಕ್ಷಣ ಕಲಿಸಿದ ಶಿಕ್ಷಕರನ್ನು ಹೆತ್ತವರನ್ನು ಶಿಕ್ಷಣ ನೀಡಿದ ಸಂಸ್ಥೆಯನ್ನು ಮರೆಯಬಾರದು ಎಂದು ಕಿವಿಮಾತುಗಳನ್ನಾಡಿದರು.
ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ ಬಿ.ಯವರು, ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ನೀಟ್ ನಂತಹ ಅನೇಕ ಪರೀಕ್ಷೆಗಳು ಹಲವಾರು ಕಾರಣಗಳಿಂದ ರದ್ದಾದರೂ ಕೂಡ ವಿದ್ಯಾರ್ಥಿಗಳು ಅದರ ಬಗ್ಗೆ ಚಿಂತಾಗ್ರಸ್ತರಾಗದೆ ತಮ್ಮ ಗುರಿಯನ್ನು ಈಡೇರಿಸುವ ನಿಟ್ಟಿನಲ್ಲಿ ನಮಗೆ ಸಿಕ್ಕಿರುವ ಹೆಚ್ಚುವರಿ ಅವಕಾಶವೆಂದು ಭಾವಿಸಿಕೊಂಡು ಮತ್ತಷ್ಟು ಓದಿನ ಕಡೆಗೆ ಗಮನ ಕೊಟ್ಟಾಗ ಇಂತಹ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲರು ಹಾಗೂ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ರವರು, ಕ್ರಿಯೇಟಿವ್ ಸಂಸ್ಥೆ ವಿದ್ಯಾರ್ಥಿಗಳಿಗೆ ಒಂದು ಉತ್ತಮವಾದ ಕಲಿಕಾ ವಾತಾವರಣವನ್ನು ಕಲ್ಪಿಸಿಕೊಟ್ಟು ಕಾಲಕಾಲಕ್ಕೆ ತಕ್ಕಂತೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳು ತಮ್ಮ ಮೇಲೆ ವಿಶ್ವಾಸವನ್ನು ಇಟ್ಟುಕೊಂಡು ನಿರಂತರವಾಗಿ ಪ್ರಯತ್ನ ಪಟ್ಟಲ್ಲಿ ಖಂಡಿತ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಹ ಸಂಸ್ಥಾಪಕರಾದ ಶ್ರೀ ಆದರ್ಶ ಎಂ. ಕೆ. ಉಪಸ್ಥಿತರಿದ್ದರು.
ನೀಟ್ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆಗೈದ ತೇಜಸ್ ಹೆಗಡೆ ಹೆಚ್. ಡಿ., ತೇಜಸ್ ಆರ್ ಬಿ, ಧ್ರುವ ವಿ.ಬಿ., ಲೇಖನ್ ಕಾರ್ಯಪ್ಪ, ಮೋಕ್ಷ ಬಿ.ಎಂ., ಹಿತಾರ್ಥ ವಿ. ಎಸ್. ನಂದನ್ ಜಿ ಇವರುಗಳನ್ನು ನಗದು ಬಹುಮಾನದೊಂದಿಗೆ ಸಂಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳು ಹಾಗೂ ಹೆತ್ತವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಂಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಉಪನ್ಯಾಸಕರಾದ ಶ್ರೀ ಲೋಹಿತ್ ಎಸ್. ಕೆ. ಕಾರ್ಯಕ್ರಮ ನಿರೂಪಿಸಿದರು.





.
.
.
.
.
.
.
.
.
.
.
.
.
.
.
.
.
.
.
.
