ಧರ್ಮಶಾಲಾ (ಜೂನ್ 14): ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ ಕಾರಣಕ್ಕೆ 21 ವರ್ಷದ ಯುವಕನನ್ನು ಕೊಲೆ ಮಾಡಿ ಮೃತದೇಹವನ್ನು 7 ತುಂಡುಗಳಾಗಿ ಕತ್ತರಿಸಿ ಚರಂಡಿಗೆ ಎಸೆದ ಭೀಕರ ಘಟನೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ನಡೆದಿದೆ.
ಮನೋಹರ್ ಲಾಲ್ ಮೃತ ದುರ್ದೈವಿ. ಈತ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನುವ ಕಾರಣಕ್ಕೆ ಯುವತಿಯ ಮನೆಯ ಮೂರು ಜನರು ಸೇರಿ ಮನೋಹರ್ನನ್ನು ಥಳಿಸಿ ಬಳಿಕ ಕಲ್ಲುಗಳಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು 7 ತುಂಡುಗಳಾಗಿ ಕತ್ತರಿಸಿ ಚರಂಡಿಗೆ ಎಸೆದು ಹೋಗಿದ್ದಾರೆ.
ಜೂನ್ 6 ರಂದು ಕಾಣೆಯಾಗಿದ್ದ ಮನೋಹರ್ ಮೃತದೇಹದ ಭಾಗಗಳು ಜೂನ್ 9 ರಂದು ಚರಂಡಿಯಲ್ಲಿ ಲಭ್ಯವಾಗಿದ್ದು ಪೋಸ್ಟ್ಮಾರ್ಟಂ ಬಳಿಕ ಭೀಕರ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.
ಘಟನೆ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ಬಾಲಕಿ ಸಹೋದರ ಶಬ್ಬೀರ್ ಸೇರಿದಂತೆ 3 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ .
ಘಟನೆಯ ವಿವರ:
ರುಖ್ಸಾನಾ ಎಂಬ ಮುಸ್ಲಿಂ ಹುಡುಗಿಯನ್ನು ಹಿಂದೂ ಹುಡುಗ ಮನೋಹರ್ ಪ್ರೀತಿಸುತ್ತಿದ್ದ. ಆದರೆ ಹುಡುಗಿ ಮನೆಯವರು ಇದಕ್ಕೆ ವಿರೋಧಿಸಿದ್ದರು. ಜೂನ್ 6 ರಂದು ಮನೋಹರ್ ಮನೆಗೆ ಹಿಂದಿರುಗುತ್ತಿದ್ದಾಗ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಆತನಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. 3 ದಿನಗಳ ನಂತರ, ಹಳ್ಳದಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಕೆಲವರು ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ, ಚರಂಡಿಯಲ್ಲಿದ್ದ ದುರ್ವಾಸನೆ ಬರುತ್ತಿದ್ದ ಬ್ಯಾಗ್ ಅನ್ನು ವಶಪಡಿಸಿಕೊಂಡು ಪರಿಶೀಲಿಸಿದಾಗ ಕೊಚ್ಚಿದ ಮೃತದೇಹ ಪತ್ತೆಯಾಗಿದೆ.
ಹಿಂದೂ ಸಂಘಟನೆಗಳು ಘಟನೆಯ ಬಗ್ಗೆ ತಿಳಿದು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿವೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ಮತ್ತು ಇತರ ಸಂಬAಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಹೆಸರನ್ನು ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದರೂ, ಮಾಧ್ಯಮ ವರದಿಗಳು ಆರೋಪಿಗಳಲ್ಲಿ ಒಬ್ಬನನ್ನು ಶಬ್ಬೀರ್ ಎಂದು ಗುರುತಿಸಿವೆ. ಆತನನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಶಬ್ಬೀರ್ ರುಖ್ಸಾನಾ ಸಹೋದರ ಎನ್ನಲಾಗಿದೆ.