ನವದೆಹಲಿ: ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಐಸಿಸ್ ಉಗ್ರ ಸೈಯದ್ ನಬೀಲ್ನನ್ನು ತಮಿಳುನಾಡಿನಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಈತ ತ್ರಿಶೂರ್ ಮೂಲದ ಘಟಕದ ಐಸಿಸ್ ಉಗ್ರ ಸಂಘಟನೆಯ ನಾಯಕನಾಗಿದ್ದಾನೆ. ಸೈಯದ್ ಕೇರಳದಲ್ಲಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದ. ಈತನ ಸಂಚು ಬಯಲಾದ ಹಿನ್ನೆಲೆ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಕರ್ನಾಟಕ, ತಮಿಳುನಾಡಿನ ಹಲವು ನಗರಗಳಲ್ಲಿ ಸುತ್ತಾಡಿದ್ದ ಈತ ವಿದೇಶಕ್ಕೆ ಪರಾರಿಯಾಗಲು ಸಿದ್ಧತೆ ನಡೆಸಿದ್ದ. ಅಷ್ಟರಲ್ಲೇ ಕಾರ್ಯಾಚರಣೆಗಿಳಿದ ಎನ್ಐಎ ಅಧಿಕಾರಿಗಳು ಸೈಯದ್ನನ್ನು ಬಂಧಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಜುಲೈ 11 ರಂದು ಪ್ರಕರಣ ದಾಖಲಿಸಿಕೊಂಡಿದ್ದ ಎನ್ಐಎ, ತ್ರಿಶೂರ್ ಮೂಲದ ಐಸಿಸ್ ಗುಂಪು ಕೇರಳದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸುತ್ತಿದೆ ಎಂಬುದನ್ನು ಪತ್ತೆ ಮಾಡಿತ್ತು.ರಾಜ್ಯದಲ್ಲಿ ಡಕಾಯಿತಿಗಳು ಸೇರಿದಂತೆ ಸರಣಿ ಅಕ್ರಮ ಚಟುವಟಿಕೆಗಳನ್ನು ಮಾಡುವ ಮೂಲಕ ಐಸಿಸ್ ಚಟುವಟಿಕೆಗಳನ್ನು ಹೆಚ್ಚಿಸಲು ಹಣವನ್ನು ಸಂಗ್ರಹಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.