ಕಾರ್ಕಳ: ಈದು ಗ್ರಾಮದ ಗುಂಡಿ ಸದಾಶಿವ ಗೌಡನ ಹತ್ಯೆಯ ಪ್ರಮುಖ ಆರೋಪಿ ಇತ್ತೀಚೆಗಷ್ಟೇ ಕೇರಳ ಪೊಲೀಸರಿಂದ ಬಂಧಿತಳಾಗಿದ್ದ ಕುಖ್ಯಾತ ನಕ್ಸಲ್ ನಾಯಕಿ ಶ್ರೀಮತಿ(೨೮) ಎಂಬಾಕೆಯನ್ನು ಕಾರ್ಕಳ ಪೊಲೀಸರು ಬಾಡಿ ವಾರಂಟ್ ಪಡೆದು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಎರಡು ದಿನಗಳ ಪೊಲೀಸ್ ಕಸ್ಟಡಿ ಪಡೆದುಕೊಂಡು ತೀವೃ ವಿಚಾರಣೆ ನಡೆಸಿ ಗುರುವಾರ ಮತ್ತೆ ಬಿಗುಭದ್ರತೆಯಲ್ಲಿ ಕಾರ್ಕಳದ ಕೋರ್ಟಿಗೆ ಹಾಜರುಪಡಿಸಿದರು. ನ್ಯಾಯಾಯಲವು ಆಕೆಯ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಕೇರಳ ಪೊಲೀಸರಿಗೆ ಆಕೆಯನ್ನು ಹಸ್ತಾಂತರಿಸಿ ಆದೇಶಿಸಿದೆ.
ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದ ಶೃಂಗೇರಿ ದೇವಳಕೊಪ್ಪನಕ್ಸಲ್ ನಾಯಕಿ ಶ್ರೀಮತಿಯನ್ನು ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ನೇತೃತ್ವದ ಪೊಲೀಸರ ತಂಡ ತೀವೃ ವಿಚಾರಣೆ ನಡೆಸಿತು.ಬಳಿಕ ಈಕೆಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಕಳೆದ ೨೦೧೧ರ ನ.೧೯ರಂದು ಸದಾಶಿವ ಗೌಡ ಅವರನ್ನು ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕಾಗಿ ಶ್ರೀಮತಿ ಮತ್ತು ಅವಳ ತಂಡವು ಅಪಹರಿಸಿ ಕಬ್ಬಿನಾಲೆಯಲ್ಲಿ ಮರಕ್ಕೆ ಕಟ್ಟಿಹಾಕಿ ಗುಂಡಿಕ್ಕಿ ಹತ್ಯೆಗೈದ ಆರೋಪದ ಮೇಲೆ ಶ್ರೀಮತಿ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆಯ ಬಳಿಕ ಆಕೆ ನಾಪತ್ತೆಯಾಗಿದ್ದಳು. ಇದೀಗ ಈ ಪ್ರಕರಣದ ನಡೆದು ಬರೋಬ್ಬರಿ ೧೩ ವರ್ಷಗಳ ಬಳಿಕ ಈಕೆಯ ವಿಚಾರಣೆ ನಡೆಸಲಾಗುತ್ತಿದ್ದು, ಯಾವ ಕಾರಣಕ್ಕಾಗಿ ಸದಾಶಿವ ಗೌಡ ಅವರನ್ನು ಹತ್ಯೆ ಮಾಡಲಾಗಿದೆ ಹಾಗೂ ಕೊಲೆ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದರು ಎನ್ನುವ ಕುರಿತು ಪೊಲೀಸರು ವಿಚಾರಣೆ ವೇಳೆ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.
ನಕ್ಸಲ್ ಶ್ರೀಮತಿಯ ವಿರುದ್ಧದ ವಿಚಾರಣೆ ಪೂರ್ಣ: ಡಿವೈಎಸ್ಪಿ ಅರವಿಂದ ಕಲಗುಜ್ಜಿ
ಕೇರಳ ಪೊಲೀಸರಿಂದ ಬಂಧಿತಳಾಗಿದ್ದ ನಕ್ಸಲ್ ಶ್ರೀಮತಿಯ ವಿಚಾರಣೆ ಮುಗಿದೆ, ಆದರೆ ಈಕೆಯ ವಿರುದ್ದ ಚಿಕಮಗಳೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆ ಬಾಕಿಯಿದ್ದು ಈ ಕುರಿತು ಪೊಲೀಸರು ಬಾಡಿ ವಾರೆಂಟ್ ಪಡೆದು ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿ ಅರವಿಂದ ಕಲಗುಜ್ಜಿ ಹೇಳಿದ್ದಾರೆ
ಪೊಲೀಸ್ ಠಾಣೆಗೆ ಬಿಗು ಭದ್ರತೆ:
ನಕ್ಸಲ್ ನಾಯಕಿ ಶ್ರೀಮತಿಯ ವಿಚಾರಣೆ ನಡೆಯುತ್ತಿದ್ದ ಹಿನ್ನಲೆಯಲ್ಲಿ ಕಾರ್ಕಳ ನಗರ ಠಾಣೆಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು. ನಕ್ಸಲ್ ನಿಗ್ರಹ ದಳದ ಪೊಲೀಸರು ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿಗಳು ಠಾಣೆಗೆ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಬಿಡುವ ದೃಶ್ಯ ಕಂಡುಬAತು.




ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ





