ಮಂಗಳೂರು : 25 ಲಕ್ಷ ರೂ. ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮನ್ಸೂರ್ ಅಲಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದು, ಇದು ಸರ್ಕಾರಿ ಪ್ರಾಯೋಜಿತ ಭ್ರಷ್ಟಾಚಾರ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ.
ಮುಡಾ ಆಯುಕ್ತ ಮನ್ಸೂರ್ ಅಲಿ ಹಾಡಹಗಲೇ ಇಷ್ಟೊಂದು ಪ್ರಮಾಣದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದರೆ ಅವರಿಗೆ ಸರ್ಕಾರದ ಕೃಪಾಕಟಾಕ್ಷ ಇರುವುದು ಸ್ಪಷ್ಟವಾಗುತ್ತದೆ.ರಾಜ್ಯ ಕಾಂಗ್ರೆಸ್ ಸರ್ಕಾರ 80% ಸರ್ಕಾರವಾಗಿದೆ. ಈ ಹಗರಣದಲ್ಲಿ ಸಿಎಂ, ಡಿಸಿಎಂ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಎಷ್ಟು ಪಾಲಿದೆ ಎನ್ನುವ ಕುರಿತು ಲೋಕಾಯುಕ್ತ ತನಿಖೆಯಿಂದ ಬಹಿರಂಗವಾಗಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದ ನಂತರ ಮಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರಕ್ಕೆ ರೇಟ್ ಕಾರ್ಡ್ ಇಡುವುದು ಮಾತ್ರ ಬಾಕಿ ಇತ್ತು. ಆಯುಕ್ತರೊಬ್ಬರು ಮಧ್ಯವರ್ತಿಯ ಮೂಲಕ ದಂಧೆಗೆ ಇಳಿದಿದ್ದಾರೆ. ಆಳುವ ಸರ್ಕಾರದ ಆದ್ಯತೆ ಇಂಥ ಅಧಿಕಾರಿಗಳೇ ಆಗಿದ್ದಾರೆ ಎಂದು ಟೀಕಿಸಿದ್ದಾರೆ.
ಇದು ಮೇಲ್ನೋಟಕ್ಕೆ ಸಣ್ಣ ಪ್ರಕರಣವಲ್ಲ ಇದರ ಹಿಂದೆ ಟಿಡಿಆರ್ ಬದಲಾವಣೆಯ ಬೃಹತ್ ಜಾಲ ಇದೆ. ಎಷ್ಟೇ ಪ್ರಭಾವಿಗಳಿದ್ದರೂ ಅವರ ಹೆಸರನ್ನು ಸರ್ಕಾರ ಬಹಿರಂಗಪಡಿಸಬೇಕೆಂದು ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ