ಕಾರ್ಕಳ : ಅಜೆಕಾರು ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿಯನ್ನು ಆತನ ಪತ್ನಿ ಪ್ರತಿಮಾ ತನ್ನ ಪ್ರಿಯಕರನ ಜತೆ ಸೇರಿ ಕೊಲೆಗೈದು ಜೈಲು ಸೇರಿದ್ದ ಕೊಲೆಗಾತಿ ಪತ್ನಿ ಪ್ರತಿಮಾಳ ಜಾಮೀನು ಅರ್ಜಿ ಮತ್ತೆ ತಿರಸ್ಕೃತವಾಗಿದೆ.
ಈ ಪ್ರಕರಣದಲ್ಲಿ ಆರೋಪಿ ಪ್ರತಿಮಾ ಈ ಹಿಂದೆ ಜಾಮೀನು ಅರ್ಜಿ ಸಲ್ಲಿಸಿ ಅದು ವಜಾಗೊಂಡಿತ್ತು. ಈ ಕೊಲೆ ಪ್ರಕರಣದ ಎರಡನೇ ಆರೋಪಿ ದಿಲೀಪ್ ಹೆಗ್ಡೆಗೆ ಈಗಾಗಲೇ ಜಾಮೀನು ಮಂಜೂರಾಗಿದೆ. ಇದೀಗ ಪ್ರತಿಮಾ ಮತ್ತೆ ಸಲ್ಲಿಸಿದ್ದ
ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರಿ ಪೀಠ ಕಾರ್ಕಳ ಮತ್ತೊಮ್ಮೆ ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿದೆ.
ಈ ಕೊಲೆ ಪ್ರಕರಣದ ಇನ್ನೋರ್ವ ಆರೋಪಿ ದಿಲೀಪ್ ಹೆಗ್ಡೆಗೆ ಹೈಕೋರ್ಟ್ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಕಳೆದ ವಾರ ಪ್ರತಿಮಾ ಜಾಮೀನು ಕೋರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರಿ ಪೀಠ ಕಾರ್ಕಳ ಇಲ್ಲಿ ಅರ್ಜಿ ಸಲ್ಲಿಸಿದ್ದರು. ಎರಡನೇ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿರುವುದರಿಂದ ತನಗೂ ಜಾಮೀನು ನೀಡುವಂತೆ ಪ್ರತಿಮಾ ಕೋರಿಕೊಂಡಿದ್ದಳು.
ಇದಕ್ಕೆ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಆಕ್ಷೇಪಣೆ ಸಲ್ಲಿಸಿ, ಎರಡನೇ ಆರೋಪಿಗೆ ಜಾಮೀನು ನೀಡಿದ್ದರೂ ಈಕೆಗೆ ಜಾಮೀನು ನೀಡಲು ಆಗುವುದಿಲ್ಲ. ಅವರಿಬ್ಬರ ಮೇಲಿನ ಆರೋಪಕ್ಕೆ ಸಾಮ್ಯತೆ ಇಲ್ಲ. ಆದುದರಿಂದ ಆಕೆಯ ಜಾಮೀನು ಅರ್ಜಿ ತಿರಸ್ಕಾರ ಮಾಡಬೇಕು ಎಂದು ವಾದಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ಸಮಿವುಲ್ಲಾ, ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಅಜೆಕಾರು ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿಯವರನ್ನು ಕಳೆದ ಅಕ್ಟೋಬರ್ 20 ರಂದು ಅವರ ಪತ್ನಿ ಪ್ರತಿಮಾ ಹಾಗೂ ಅಕೆ ಪ್ರಿಯಕರ ದಿಲೀಪ್ ಹೆಗ್ಡೆ ಸೇರಿ ಉಸಿರಿಗಟ್ಟಿಸಿ ಹತ್ಯೆಗೈದಿದ್ದರು. ಪತ್ನಿ ಪ್ರತಿಮಾ ಪೂಜಾರಿ ತನ್ನ ಪ್ರಿಯಕರನಿಗಾಗಿ ಗಂಡನ ಊಟದಲ್ಲಿ ನಿಧಾನ ವಿಷ ಬೆರೆಸಿ ಹತ್ಯೆಗೈಯುವ ಭಯಾನಕ ಸಂಚು ರೂಪಿಸಿದ್ದಳು.ಆದರೆ ಗಂಡ ಬಾಲಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮನೆಗೆ ಬಂದ ಬಳಿಕ ಈಕೆಯ ಕೊಲೆ ಸಂಚು ವಿಫಲವಾದ ಹಿನ್ನೆಲೆಯಲ್ಲಿ ತನ್ನ ಪ್ರಿಯಕರನನ್ನು ನಡುರಾತ್ರಿ ಕರೆಯಿಸಿ ಹತ್ಯೆಗೈದಿದ್ದಳು. ಈ ಕೊಲೆ ಪ್ರಕರಣದ ರಹಸ್ಯವನ್ನು ಪ್ರತಿಮಾ ಬಾಯಿಬಿಟ್ಟ ಹಿನ್ನೆಲೆಯಲ್ಲಿ ಆಕೆ ಹಾಗೂ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಅಜೆಕಾರು ಪೊಲೀಸರು ಅ.25 ರಂದು ಬಂಧಿಸಿದ್ದರು.