ಕಾರ್ಕಳ ಏ.30-2025: ಕಾರ್ಕಳದ ಡಾ. TMA ಪೈ ರೋಟರಿ ಆಸ್ಪತ್ರೆಯು ತನ್ನ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸೆ ಸೇವೆಗಳಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಅಕ್ಟೋಬರ್ 2023 ರಲ್ಲಿ ಈ ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ಈವರೆಗೆ 50 ಯಶಸ್ವೀ ಗರ್ಭಧಾರಣೆಯ ಸಾಧನೆಯ ಮಾಡಿದೆ. ಆಸ್ಪತ್ರೆಯ ಸಂತಾನೋತ್ಪತ್ತಿ ಔಷಧ ಕಾರ್ಯಕ್ರಮವು ಪ್ರಾಥಮಿಕವಾಗಿ ಅಂಡೋತ್ಪತ್ತಿ ಪ್ರಚೋದನೆ ಮತ್ತು ಫಾಲಿಕ್ಯುಲರ್ ಇಮೇಜಿಂಗ್ ಸೇರಿದಂತೆ ಕಡಿಮೆ-ಮಧ್ಯಸ್ಥಿಕೆ ವಿಧಾನಗಳ ಮೂಲಕ ಫಲವತ್ತತೆ ಆರೈಕೆಯಲ್ಲಿ ಆಸ್ಪತ್ರೆಯ ಉತ್ತಮ ಸಾಧನೆ ಮಾಡಿದೆ.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸೆಯ ತಜ್ಞ ಡಾ. ಪ್ರತಾಪ್ ಕುಮಾರ್ ಎನ್ ಅವರ ತಜ್ಞ ಮಾರ್ಗದರ್ಶನದಲ್ಲಿ ಆಸ್ಪತ್ರೆಯ ಸಂತಾನೋತ್ಪತ್ತಿ ಔಷಧ ಉಪಕ್ರಮವನ್ನು ಅಭಿವೃದ್ಧಿಪಡಿಸಲಾಗಿದೆ. ಅವರು ಕಾರ್ಕಳ TMA ಪೈ ರೋಟರಿ ಆಸ್ಪತ್ರೆಗೆ ನಿಯಮಿತವಾಗಿ ಭೇಟಿ ನೀಡಿ ಸಾಕಷ್ಟು ಉಪಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಫಲವತ್ತತೆ ಆರೈಕೆ ಕಾರ್ಯಕ್ರಮವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಇದರ ಜತೆಗೆ ಈ ಕಾರ್ಯಕ್ರಮದ ಯಶಸ್ಸಿಗೆ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ. ಸಂಜಯ್, ತಜ್ಞ ವೈದ್ಯ ಡಾ. ಕೌಶಿಕ್ ಮತ್ತು ಅವರ ತಂಡ ಪ್ರಮುಖ ಪಾತ್ರ ವಹಿಸಿದೆ. ಅವರು ದೈನಂದಿನ ಕ್ಲಿನಿಕಲ್ ಅಭ್ಯಾಸದಲ್ಲಿ ಫಲವತ್ತತೆ ಸೇವೆಗಳನ್ನು ಸಂಯೋಜಿಸುವ ಪ್ರಯತ್ನಗಳನ್ನು ನಡೆಸಿದ್ದಾರೆ. ಪ್ರಸೂತಿ ಮತ್ತು ಸ್ತ್ರೀರೋಗ ಸಲಹೆಗಾರರು, ನರ್ಸಿಂಗ್ ತಂಡ ಮತ್ತು ಸಹಾಯಕ ಸಿಬ್ಬಂದಿಯ ಸಾಮೂಹಿಕ ಬದ್ಧತೆಯು ಕಾರ್ಯಕ್ರಮದ ಉನ್ನತ ಗುಣಮಟ್ಟದ ಆರೈಕೆಯನ್ನು ಮತ್ತಷ್ಟು ಬಲಪಡಿಸಿದೆ.
ಈ ಮಹತ್ವದ ಮೈಲಿಗಲ್ಲು ಸಾಧಿಸಿದ ಸಂದರ್ಭದಲ್ಲಿ ಸಂತಸವನ್ನು ಹಂಚಿಕೊಂಡ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ್ ಬಲ್ಲಾಳ ಅವರು ತಂಡದ ಸಮರ್ಪಣೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಜನಸಾಮಾನ್ಯರಿಗೆ ಗುಣಮಟ್ಟದ ಆರೋಗ್ಯ ಸೇವೆಯ ಜತೆಗೆ ಕೈಗೆಟುಕುವ ಸಂತಾನೋತ್ಪತ್ತಿ ಆರೋಗ್ಯ ಸೇವೆಯನ್ನು ನೀಡಲು ನಾವು ಹೆಮ್ಮೆಪಡುತ್ತೇವೆ. ಆಸ್ಪತ್ರೆಯ ಈ ಸಾಧನೆಯಿಂದ ಕಾರ್ಕಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಾಕಷ್ಟು ಕುಟುಂಬಗಳಿಗೆ ಪ್ರಯೋಜನಕಾರಿಯಾಗಲಿದೆ ಎಂದು ಡಾ.ಕೀರ್ತಿನಾಥ ಬಳ್ಳಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.