

ಕಾರ್ಕಳ: “ದೇಶ ಕಂಡ ಮಹಾನ್ ನಾಯಕರುಗಳೆಲ್ಲ ಸೇವೆ ಮತ್ತು ಸ್ವಾಭಿಮಾನದ ಬದುಕಿನಿಂದಲೇ ಗುರುತಿಸಿಕೊಂಡವರು. ಗಾಂಧೀಜಿಯವರ ಜನ್ಮಶತಾಬ್ದಿಯ ಸ್ಮರಣೆಯೊಂದಿಗೆ ಆರಂಭಗೊಂಡ ಈ ಎನ್ ಎಸ್ ಎಸ್ ನಿಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುವುದರೊಂದಿಗೆ ಬದುಕನ್ನು ಉಜ್ವಲಗೊಳಿಸಲಿ” ಎಂದು ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಶುಭ ಹಾರೈಸಿದರು.
ಅವರು ಕಾರ್ಕಳದ ಹಿರ್ಗಾನ ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಶ್ರೀ ಪೂರ್ಣಸಂಧ್ಯಾ ಕಾಲೇಜು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆಗಮಿಸಿ ವಿದ್ಯಾರ್ಥಿಗಳಿಗೆ ಎನ್ ಎಸ್ ಎಸ್ ಮಹತ್ವವನ್ನು ವಿವರಿಸಿ ಶುಭಹಾರೈಸಿದರು.
ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಕನ್ಯಾ ಮೇರಿ ಜೆ. ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಾಂಡುರಂಗ ನಾಯಕ್, ನಿಕಟಪೂರ್ವ ಆಡಳಿತ ಮೊಕ್ತೇಸರರಾದ ಅಶೋಕ್ ನಾಯಕ್, ಹಿರ್ಗಾನ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಸುನೀತಾ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮ ಯೋಜನಾಧಿಕಾರಿಗಳಾದ ಚಿರಂಜನ್ ಕೆ ಶೇರಿಗಾರ್ ಹಾಗೂ ಎನ್ಎಸ್ಎಸ್ ಘಟಕದ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.
ಡಾ.ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿ, ಘಟಕ ನಾಯಕರಾದ ಗಗನ್ ಜೆ. ಸುವರ್ಣ ವಂದಿಸಿದರು.ಸ್ವಯಂ ಸೇವಕರಾದ ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮವನ್ನು ನಿರೂಪಿಸಿದರು.



