

ಕಾರ್ಕಳ, ಸೆ.06:ಕುಡಿದು ನಿತ್ಯ ಗಲಾಟೆ ಮಾಡುತ್ತಿದ್ದ ದಂಪತಿಗಳ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯೇ ತನ್ನ ಪತಿಗೆ ಕತ್ತಿಯಿಂದ ಮನಸೋಇಚ್ಚೆ ಕಡಿದು ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಪರಪ್ಪಾಡಿ ಎಂಬಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ನಿಟ್ಟೆ ಪರಪ್ಪಾಡಿಯ ಶೇಖರ ಮೂಲ್ಯ(65) ಎಂಬವರು ಪತ್ನಿಯಿಂದ ಹಲ್ಲೆಗೊಳಗಾದವರು,ಪತ್ನಿ ಮಾಲತಿ ಮೂಲ್ಯ ಆರೋಪಿಯಾಗಿದ್ದು, ಕುಡಿದ ಮತ್ತಿನಲ್ಲಿ ಗಂಡನನ್ನು ಕಡಿದು ಹತ್ಯೆಗೆ ಯತ್ನಿಸಿದ ಬಳಿಕ ಅಪರಿಚಿತ ವ್ಯಕ್ತಿಗಳು ಕಡಿದು ಪರಾರಿಯಾಗಿದ್ದಾರೆ ಎಂದು ಕಥೆ ಕಟ್ಟಿ ಸಂಬಂಧಿಕರನ್ನು ನಂಬಿಸಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾಳೆ.
ಘಟನೆ ಹಿನ್ನೆಲೆ:
ಶೇಖರ ಮೂಲ್ಯ ಹಾಗೂ ಮಾಲತಿ ಮೂಲ್ಯ ದಂಪತಿ ಕಳೆದ 2011ರಲ್ಲಿ ತಮ್ಮದೇ ಸಮುದಾಯದ ರಾಮಣ್ಣ ಮೂಲ್ಯ(75) ಎಂಬವರನ್ನು ತಮ್ಮ ಮನೆಯಲ್ಲಿ ಕಡಿದು ಕೊಲೆ ಮಾಡಿ ಶವವನ್ನು ಮನೆಯ ಅಂಗಳದಲ್ಲಿ ಎಸೆದಿದ್ದರು. ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಕೊಲೆ ಪ್ರಕರಣದಲ್ಲಿ ಗಂಡ ಹೆಂಡತಿ ಜೀವಾವಧಿ ಶಿಕ್ಷೆಗೆ ಒಳಗಾಗಿ 10 ವರ್ಷ ಜೈಲು ಶಿಕ್ಷೆ ಅನುಭವಿಸಿ ಸನ್ನಡತೆ ಆಧಾರದಲ್ಲಿ 2021 ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ ಜೈಲಿನಿಂದ ಬಿಡುಗಡೆ ಆಗಿದ್ದರೂ ಜೀವನದಲ್ಲಿ ಪಾಠ ಕಲಿಯದ ದಂಪತಿ ಕುಡಿದು ನಿತ್ಯ ಜಗಳವಾಡುತ್ತಿದ್ದರು. ಸೆ.06 ರಂದು ರಾತ್ರಿ ಸುಮಾರು10 ಗಂಟೆ ಸುಮಾರಿಗೆ ಇವರಿಬ್ಬರ ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಮಾಲತಿ ಕತ್ತಿಯಿಂದ ಪತಿ ಶೇಖರ ಮೂಲ್ಯ ಅವರಿಗೆ ಯದ್ವಾತದ್ವ ಕತ್ತಿಯಿಂದ ಕಡಿದು ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಕತ್ತಿಯಿಂದ ಕಡಿದ ಪರಿಣಾಮ ಶೇಖರ ಮೂಲ್ಯ ತೀವ್ರ ರಕ್ತಸ್ರಾವಗೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ವೇಳೆ ತನ್ನ ಗಂಡನಿಗೆ ಅಪರಿಚಿತ ವ್ಯಕ್ತಿಗಳು ಕಡಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಮಾಲತಿ ಮೂಲ್ಯ ತನ್ನ ಮಗಳಿಗೆ ಮೊಬೈ ಕರೆ ಮಾಡಿ ತಿಳಿಸಿದ್ದಾರೆ. ಇತ್ತ ವಿಷಯ ತಿಳಿದ ಮಗಳು ಅಳಿಯ ಗಂಭೀರವಾಗಿ ಗಾಯಗೊಂಡ ಶೇಖರ ಮೂಲ್ಯ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯ ಕುರಿತು ಮಾಹಿತಿ ಕಲೆ ಹಾಕಿದ ಕಾರ್ಕಳ ಗ್ರಾಮಾಂತರ ಠಾಣಾ ಎಸ್ ಐ ಪ್ರಸನ್ನ ಕುಮಾರ್ ಸಂಶಯಗೊಂಡು ಪತ್ನಿ ಮಾಲತಿ ಮೂಲ್ಯ ಅವರನ್ನು ತೀವ್ರ ವಿಚಾರಣೆ ನಡೆಸಿದಾಗ ಗಂಡ ಕುಡಿದು ಬಂದು ಜಗಳವಾಡುತ್ತಿದ್ದ ಹಾಗಾಗಿ ನಾನೇ ಗಂಡನಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾರೆ.
ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿ ಮಾಲತಿ ಮೂಲ್ಯ ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಸನ್ನಡತೆ ಆಧಾರದಲ್ಲಿ ಜೈಲಿನಿಂದ ಬಿಡುಗಡೆಯಾದ ಆಕೆ ಕೇವಲ ನಾಲ್ಕು ವರ್ಷದಲ್ಲೇ ಪತಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪತ್ನಿ ಮತ್ತೆ ಜೈಲು ಸೇರಿದ್ದು ಮಾತ್ರ ವಿಪರ್ಯಾಸ.









