
ಕಾರ್ಕಳ : ಮಿಯ್ಯಾರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕರಾದ ಸುನಿಲ್ ಕುಮಾರ್ ಅವರು ಇಂದು ಬೆಳಿಗ್ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪ್ರಸಕ್ತ ವಿದ್ಯಮಾನ ಕುರಿತು ಪರಿಶೀಲನೆ ನಡೆಸಿ ಚರ್ಚಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಕರಾದ ಮದರಸ ಎಸ್ ಮಕಾಂದರ ಅವರು ಪಸತಿ ಶಾಲೆಯ ವಿದ್ಯಾರ್ಥಿಗಳಿಗೆ ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಾ, ವಿದ್ಯಾರ್ಥಿಗಳಿಗೆ ಬಸ್ಕಿ ಹೊಡೆಸುವುದು ಇತರ ದೈಹಿಕ ಶಿಕ್ಷೆಗಳನ್ನು ನೀಡುವುದು ಸೇರಿದಂತೆ ವಿದ್ಯಾರ್ಥಿಗಳ ಜನಿವಾರ ಮತ್ತು ಕೈ ಮತ್ತು ಕುತ್ತಿಗೆ ದಾರಗಳನ್ನು ತೆಗೆಸಿ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಮಾಡಿರುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳು, ಪೋಷಕರು ಮತ್ತು ಸ್ಥಳೀಯರಲ್ಲಿ ಸಾಮಾಜಿಕ ಅಶಾಂತಿ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳೊಂದಿಗೆ ವಸತಿ ಶಾಲೆಗೆ ಭೇಟಿ ನೀಡಿ, ಸಭೆ ನಡೆಸಿ ಘಟನೆಯ ಬಗ್ಗೆ ವಿಸ್ತçತವಾಗಿ ಚರ್ಚಿಸಿದರು.
ಮೊರಾರ್ಜಿ ವಸತಿ ಶಾಲೆಯು ಉತ್ತಮ ಹಾಗೂ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಇದೀಗ ಇಂತಹ ಶಿಕ್ಷಕರ ದುರ್ವರ್ತನೆಯಿಂದಾಗಿ ಶಾಲೆಯ ಉತ್ತಮ ವಾತಾವರಣ ಕೆಡಿಸಿದಂತಾಗಿದೆ. ಈ ರೀತಿಯ ಘಟನೆಗಳು ನಮ್ಮ ಕಾರ್ಕಳದಲ್ಲಿ ನಡೆದಿರುವುದು ಅತ್ಯಂತ ಖಂಡನೀಯ. ಇಂತಹ ಘಟನೆ ಸಮಾಜದ ನಡುವೆ ಒಡಕು ಸೃಷ್ಠಿಸಲು ಕುಮ್ಮಕ್ಕು ನೀಡಿದಂತಾಗುತ್ತದೆ. ಆದ ಕಾರಣ ಇಂತಹ ಶಿಕ್ಷಕರ ವಿರುದ್ದ ಸೂಕ್ತ ಶಿಕ್ಷೆ ಆಗುವಂತೆ ಹಾಗೂ ಈ ರೀತಿಯ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಎಚ್ಚರಿಕೆ ನೀಡಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಭೋಧನ ಕ್ರಮಗಳು, ವಸತಿ ನಿಲಯಗಳ ಮೂಲಭೂತ ಸೌಕರ್ಯಗಳು ಮತ್ತು ಊಟೋಪಚಾರದ ಕುರಿತು ಮುಕ್ತವಾಗಿ ಮಾತುಕತೆ ನಡೆಸಿ ಯಾವುದೇ ಸಮಸ್ಯೆಗಳು ಇದ್ದರು ನನ್ನ ಗಮನಕ್ಕೆ ತರುವಂತೆ ಹಾಗೂ ಭಯ ಮುಕ್ತವಾಗಿ ಉತ್ತಮ ಶಿಕ್ಷಣ ಪಡೆಯುವ ಕಡೆ ಗಮನ ಹರಿಸುವಂತೆ ಆತ್ಮವಿಶ್ವಾಸ ತುಂಬಿದರು.
ಈ ಸಂದರ್ಭದಲ್ಲಿ ಕಾರ್ಕಳ ತಹಶಿಲ್ದಾರರು, ಕಾರ್ಯ ನಿರ್ವಹಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರು ಶಾಲೆಯ ಶಿಕ್ಷಕ ವರ್ಗ, ಅಧಿಕಾರಿಗಳು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

