
ಕಾರ್ಕಳ, ನ,21: ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ಸರ್ಕಾರಿ ಕಾಮಗಾರಿಗಳಲ್ಲಿ ಏಕಸ್ವಾಮ್ಯತೆ ಸಾಧಿಸಲು ಗುತ್ತಿಗೆದಾರ ಮೇಲೆ ದಬ್ಬಾಳಿಕೆ ಹಾಗೂ ಸಾರ್ವಾಜನಿಕ ಸ್ವತ್ತುಗಳಿಗೆ ಹಾನಿ ಮಾಡಿರುವ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕೆಂದು ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಪುರ ಸುರೇಶ್ ಶೆಟ್ಟಿ ಒತ್ತಾಯಿಸಿದ್ದಾರೆ.
ಮುನಿಯಾಲು- ಪಡುಕೂಡುರು ಖಜಾನೆ ರಸ್ತೆ ನಿರ್ಮಾಣದ 2.50 ಕೋಟಿ ಕಾಮಗಾರಿ ಪ್ರಶಾಂತ್ ಶೆಟ್ಟಿ ಮಳವಳ್ಳಿ ಎಂಬವರಿಗೆ ಟೆಂಡರ್ ಆಗಿತ್ತು. ಈ ಕಾಮಗಾರಿ ಇನ್ನಷ್ಟೇ ಪ್ರಾರಂಭವಾಗಬೇಕಿತ್ತು. ಆದರೆ ಎಲ್ಲಾ ಸರ್ಕಾರಿ ಕಾಮಗಾರಿಗಳ ಗುತ್ತಿಗೆ ತನಗೇ ಸಿಗಬೇಕೆಂಬ ದುರಾಸೆಯಿಂದ ಉದಯಕುಮಾರ್ ಶೆಟ್ಟಿ ಅಕ್ರಮವಾಗಿ ಮುನಿಯಾಲು- ಪಡುಕೂಡುರು ಖಜಾನೆ ರಸ್ತೆಯನ್ನು ಅಗೆದು ಕಾಮಗಾರಿ ಪ್ರಾರಂಭ ಮಾಡಿರುತ್ತಾರೆ. ಈ ವಿಷಯ ತಿಳಿದು ಸರ್ಕಾರಿ ಎಂಜಿನಿಯರ್ ಗುತ್ತಿಗೆದಾರ ಪ್ರಶಾಂತ ಶೆಟ್ಟಿ ಮಳವಳ್ಳಿಯವರಿಗೆ ನೋಟಿಸ್ ನೀಡಿದ್ದಾರೆ. ಆದರೆ ಈ ಕೃತ್ಯಕ್ಕೆ ಮೂಲ ಕಾರಣೀಕರ್ತ ಮುನಿಯಾಲು ಉದಯ ಕುಮಾರ್ ಶೆಟ್ಟಯಾಗಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಕಾಮಗಾರಿಯ ಟೆಂಡರ್ ಪ್ರಶಾಂತ್ ಶೆಟ್ಟಿಯವರು ಪಡೆದಿದ್ದು, ಆದರೆ ಉದಯ ಶೆಟ್ಟಿಯವರು ಹೇಗೆ ಕಾಮಗಾರಿ ಆರಂಭಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು,ಇಂತಹ ಕಾನೂನುಬಾಹಿರ ಹಾಗೂ ದಬ್ಬಾಳಿಕೆ ನೀತಿಯು ಕಾರ್ಕಳ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದ್ದು, ಬೇರೆ ಗುತ್ತಿಗೆದಾರರು ತಲೆ ಎತ್ತಬಾರದು ಎಂಬAತೆ ವರ್ತಿಸುತ್ತಿದ್ದಾರೆ ಸರ್ಕಾರಿ ಸ್ವತ್ತನ್ನು ಹಾನಿ ಮಾಡಿದ ಅವರ ವಿರುದ್ಧ ಮೊದಲು ಕ್ರಮವಾಗಬೇಕು. ಕಳೆದ ಎರಡೂವರೆ ವರ್ಷದಿಂದ ಉದಯ ಶೆಟ್ಟಿ ಜಿಲ್ಲಾಡಳಿತ ವನ್ನು ದುರ್ಬಳಕೆ ಮಾಡಿಕೊಂಡು ಜಲ್ಲಿ, ಮರಳು, ಕೆಂಪುಗಲ್ಲು ವ್ಯಾಪಾರಸ್ಥರಿಗೆ ಕೇಸುಗಳನ್ನು ಹಾಕಿಸುತ್ತಾ ನಿರಂತರವಾಗಿ ಕಿರುಕುಳವನ್ನು ನೀಡುತ್ತಿದ್ದವರು ಈಗ ತನ್ನ ಕ್ಷೇತ್ರದಲ್ಲಿ ನನ್ನನ್ನು ಬಿಟ್ಟು ಬೇರೆ ಯಾರೂ ಗುತ್ತಿಗೆ ಕಾಮಗಾರಿ ಮಾಡಬಾರದು ಎಂಬ ಕಾರಣಕ್ಕಾಗಿ ಇತರ ಗುತ್ತಿಗೆದಾರರ ಮೇಲೆ ದಬ್ಬಾಳಿಕೆ ಮಾಡುತ್ತಾ ಸರ್ಕಾರಿ ಗುತ್ತಿಗೆ ಯಲ್ಲಿ ಏಕಸ್ವಾಮ್ಯತೆ ಸಾಧಿಸಲು ಪ್ರಯತ್ನಿಸುತ್ತಾ ಸರ್ಕಾರಿ ಕಾಮಗಾರಿಗಳೆಲ್ಲವೂ ತಮ್ಮ ಭ್ರಷ್ಟಾಚಾರದ ಆಹಾರ ಎಂದು ಉಳಿದ ಗುತ್ತಿಗೆದಾರರನ್ನು ತುಳಿಯುತ್ತಿದ್ದಾರೆ ಎಂದು ಸುರೇಶ್ ಶೆಟ್ಟಿ ಆರೋಪಿಸಿದ್ದಾರೆ.
ಉದಯ ಶೆಟ್ಟಿಯವರ ಸರ್ವಾಧಿಕಾರಿ ಧೋರಣೆಯನ್ನು ಅಧಿಕಾರಿಗಳು ಕಂಡು ಕಾಣದಂತೆ ಸುಮ್ಮನೆ ಕುಳಿತಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಲೋಕೋಪಯೋಗಿ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಅಗೆದು ಸರ್ಕಾರದ ಆಸ್ತಿಗೆ ಹಾನಿ ಮಾಡಿದ ಮುನಿಯಾಲು ಉದಯಕುಮಾರ್ ಶೆಟ್ಟಿ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ ಒತ್ತಾಯಿಸಿದ್ದಾರೆ.
