
ಕಾರ್ಕಳ, ಡಿ.25: ಮುಂಬರುವ 2027ರ ಜನವರಿಯಲ್ಲಿ ಕಾರ್ಕಳದ ಇತಿಹಾಸಪ್ರಸಿದ್ಧ ಬಾಹುಬಲಿ ಮಹಾಮಸ್ತಕಾಭಿಷೇಕ ಹಿನ್ನಲೆಯಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ನಲ್ಲೂರಿನ ಶ್ರೀ ಕೂಷ್ಮಾಂಡಿನಿ ಜೈನ ಬಸದಿ ಬಳಿ ಸಭಾ ಭವನ ನಿರ್ಮಾಣ ಕಾಮಗಾರಿಗೆ 50 ಲಕ್ಷ ಅನುದಾನ ಮಂಜೂರಾಗಿದ್ದು,ಈ ಪೈಕಿ ಈಗಾಗಲೇ 25 ಲ.ರೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ತಿಳಿಸಿದ್ದಾರೆ .
ಉಡುಪಿ ಜಿಲ್ಲೆ ಕಾರ್ಕಳ ವಿಧಾನಸಭಾ ಕ್ಷೇತ್ರವು ಜೈನ ಸಮುದಾಯದ ಐತಿಹಾಸಿಕ ಹೆಗ್ಗುರುತಾದ ಕಾರ್ಕಳ ಶ್ರೀ ಗೊಮ್ಮಟೇಶ್ವರ ಏಕಶಿಲಾ ಪ್ರತಿಮೆಗೆ ಮುಂದಿನ ವರ್ಷ 2027 ಜನವರಿಯಲ್ಲಿ 12 ವರ್ಷಗಳಿಗೆ ಒಮ್ಮೆ ನಡೆಯುವ ವಿಶ್ವವಿಖ್ಯಾತ, ಐತಿಹಾಸಿಕ ಶ್ರೀ ಗೊಮ್ಮಟೇಶ್ವರ ಸ್ವಾಮಿಯ ಮಹಾ ಮಸ್ತಕಾಭಿಷೇಕ ನಡೆಯಲಿರುವುದರಿಂದ ದೇಶ ವಿದೇಶಗಳಿಂದ ಆನೇಕ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಆಗಮಿಸುವ ಯಾತ್ರಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾತ್ರಿ ನಿವಾಸ, ಅನ್ನ ಛತ್ರಗಳನ್ನು ಒಳಗೊಂಡ ಸುಸಜ್ಜಿತ ಸಭಾಭವನಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಾಗೂ ಕಾರ್ಕಳ ಗೊಮ್ಮಟ ಬೆಟ್ಟದಬಳಿ ಮತ್ತು ನಲ್ಲೂರು ಕೂಷ್ಮಾಂಡಿನಿ ಜೈನ ಬಸದಿ ಬಳಿ ಮತ್ತು ವರಂಗ ಜೈನ ಬಸದಿ ಬಳಿ ಸಭಾ ಭವನಗಳ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿಗೆ ಅನುದಾನ ಬಿಡುಗಡೆಗಾಗಿ ಈಗಾಗಲೇ ಮನವಿ ಸಲ್ಲಿಸಲಾಗಿದೆ.
ಇತ್ತೀಚಿಗೆ ನಡೆದ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸಂಬಂದಪಟ್ಟ ಇಲಾಖಾ ಸಚಿವರು, ಅಧಿಕಾರಿಗಳ ಗಮನಕ್ಕೆ ತಂದ ಪರಿಣಾಮ ಇದೀಗ ನಲ್ಲೂರು ಕೂಷ್ಮಾಂಡಿನಿ ಜೈನ ಬಸದಿ ಬಳಿ ಸಭಾ ಭವನ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿದೆ.
ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಇನ್ನೂ ಆನೇಕ ಅಭಿವೃದ್ಧಿ ಕಾರ್ಯಗಳು, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗಿದ್ದು, ಮುಖ್ಯಮಂತ್ರಿಗಳು ಮುಂದಿನ ಬಜೆಟ್ ನಲ್ಲಿ ಅನುದಾನ ಕಾಯ್ದಿರಿಸುವುದಾಗಿ ಭರವಸೆ ನೀಡಿರುತ್ತಾರೆ ಎಂದು ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


.
.
