
ಕಾರ್ಕಳ,ಜ.25: ಇತಿಹಾಸಪ್ರಸಿದ್ಧ ಅತ್ತೂರು ಸಂತ ಲಾರೆನ್ಸ್ ಮೈನರ್ ಬಸಿಲಿಕಾದ ವಾರ್ಷಿಕ ಮಹೋತ್ಸವವು ಬಸಿಲಿಕಾ ಧ್ವಜಾರೋಹಣದ ಮೂಲಕ ಭಕ್ತಿಭಾವ ಮತ್ತು ಭವ್ಯತೆಯಿಂದ ಭಾನುವಾರ ಆರಂಭಗೊಂಡಿತು. ಈ ವರ್ಷದ ಮಹೋತ್ಸವವು ವಿಶೇಷ ಮಹತ್ವ ಹೊಂದಿದ್ದು, ಬಸಿಲಿಕಾಗೆ ಮೈನರ್ ಬಸಿಲಿಕಾ ಪದವಿ ಲಭಿಸಿದ 10ನೇ ವರ್ಷದ ಸಂಭ್ರಮ ಹಾಗೂ 250 ವರ್ಷಗಳಿಗೂ ಅಧಿಕ ಇತಿಹಾಸವನ್ನು ಸ್ಮರಿಸುವ ಕ್ಷಣವಾಗಿದೆ. ಈ ವರ್ಷದ ಮಹೋತ್ಸವವನ್ನು “ನಾನು ನಿನ್ನನ್ನು ಪ್ರೀತಿಸಿದ್ದೇನೆ” (ಮಲಾಕಿ 1:2) ಎಂಬ ವಿಷಯ ದೊಂದಿಗೆ ಆಚರಿಸಲಾಗುತ್ತಿದೆ.
ಮಹೋತ್ಸವವನ್ನು ಜೆರಾಲ್ಡ್ ಐಸಾಕ್ ಲೋಬೊ, ಬಸಿಲಿಕಾ ಧ್ವಜಾರೋಹಣ ನೆರವೇರಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿ’ಸಿಲ್ವಾ ಅವರು ನಿರೂಪಿಸಿದರು. ವಂ. ಸ್ವಾಮಿ. ಆಲ್ಟನ್ ಡಿಸೋಜ ಅವರು ಎಲ್ಲಾ ಭಕ್ತರಿಗೆ ಹಾರ್ದಿಕ ಸ್ವಾಗತ ಕೋರಿದರು ಮತ್ತು ಮಹೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು. ಪರಮಪೂಜ್ಯ. ಜೆರಾಲ್ಡ್ ಐಸಾಕ್ ಲೋಬೊ ಅವರು ಸಭೆಯನ್ನು ಉದ್ದೇಶಿಸಿ ಮಹೋತ್ಸವದ ಯಶಸ್ಸಿಗಾಗಿ ಶುಭಾಶಯಗಳನ್ನು ವ್ಯಕ್ತಪಡಿಸಿದರು. ಸಭೆಗೆ ಧನ್ಯವಾದಗಳನ್ನು ಶ್ರೀ ರೋನಾಲ್ಡ್ ನೊರೊನ್ಹಾ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ. ರಾಬಿನ್ ಸಂತುಮಾಯರ್ ಹಾಗೂ ಆಧ್ಯಾತ್ಮಿಕ ನಿರ್ದೇಶಕ ವಂ. ಸ್ವಾಮಿ. ರೋಮನ್ ಮಸ್ಕರೆನ್ಹಸ್ ಸೇರಿದಂತೆ ಇತರ ಧರ್ಮಗುರುಗಳು, ಪಾಲನ ಮಂಡಳಿಯ ಸದಸ್ಯರು ಮತ್ತು ಅನೇಕ ಭಕ್ತರು ಉಪಸ್ಥಿತರಿದ್ದರು.

.
.
.
.
