
ಅಮರಾವತಿ,ಏ.06: ವಿದೇಶಿ ಹ್ಯಾಂಡ್ಲರ್ಗಳು ಮತ್ತು ಐಸಿಸ್, ಭಾರತೀಯ ಉಪಖಂಡದಲ್ಲಿ ಅಲ್ಕಾಯಿದಾ(ಎಕ್ಯೂಐಎಸ್) ಸೇರಿದಂತೆ ಉಗ್ರಗಾಮಿ ಸಂಘಟನೆಗಳೊಂದಿಗೆ ಶಂಕಿತ ಸಂಪರ್ಕ ಹೊಂದಿರುವ ಭಯೋತ್ಪಾದಕ ಜಾಲವೊಂದನ್ನು ಭೇದಿಸಿರುವುದಾಗಿ ಗುಪ್ತಚರ ಮೂಲಗಳು ತಿಳಿಸಿವೆ.ಈ ಜಾಲಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮೂವರು ಸೇರಿ ಒಟ್ಟು 12 ಶಂಕಿತರನ್ನು ಬಂಧಿಸಲು ಬಿಹಾರ, ದೆಹಲಿ, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ರಾಜಸ್ಥಾನಗಳಲ್ಲಿ ಆಂಧ್ರಪ್ರದೇಶ ಪೊಲೀಸರು ಇದಕ್ಕೂ ಮುನ್ನ ವಿಶೇಷ ತಂಡಗಳನ್ನು ನಿಯೋಜಿಸಿದ್ದರು.
ಪ್ರಮುಖ ಆರೋಪಿ ರಹಮತುಲ್ಲಾ ಷರೀಫ್ ಮತ್ತಾತನ ಸಹಚರರು ಜಿಹಾದ್ ಪ್ರಚುರಪಡಿಸುವ ಮತ್ತು ವೀಡಿಯೊಗಳ ಮೂಲಕ ಯುವಕರನ್ನು ಪ್ರೇರೇಪಿಸುವ ಕಾರ್ಯದಲ್ಲಿ ತೊಡಗಿದ್ದರು. ಮಹಿಳೆಯರಿಗೆ ಪ್ರತ್ಯೇಕ ‘ಖವಾತೀನ್’ ಎಂಬ ವಿಭಾಗ ಸೇರಲು ಮನವೊಲಿಸಲಾಗುತ್ತಿತ್ತು. ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸಲು 40ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ವಿವಿಧ ದೇಶದ ಹ್ಯಾಂಡ್ಲರ್ಗಳೊಂದಿಗೆ ಸಂಪರ್ಕ ಸಾಧಿಸಿ ಉಗ್ರಗಾಮಿ ತರಬೇತಿ ಪಡೆಯುತ್ತಿದ್ದರು. ಜತೆಗೆ, ಆರೋಪಿಗಳು ಒಸಾಮಾ ಬಿನ್ ಲಾಡೆನ್, ಇಸ್ರಾರ್ ಅಹ್ಮದ್ ಶೇಕ್, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜಾಕಿರ್ ನಾಯಕ್ ಮತ್ತು ಅನ್ವರ್ ಅಲ್ ಅವ್ಹಾಕಿ ಅವರ ವೀಡಿಯೊಗಳನ್ನು ಪ್ರಸಾರ ಮಾಡಿ ಮುಸ್ಲಿಂ ಯುವಕರನ್ನು ಜಿಹಾದ್ ಮತ್ತು ಉಗ್ರಗಾಮಿ ಸಿದ್ಧಾಂತಗಳತ್ತ ಪ್ರಭಾವಿತರಾಗಲು ಪ್ರೇರೇಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಆರೋಪಿಗಳು ರಾಷ್ಟ್ರ ಲಾಂಛನಗಳನ್ನು ಅವಮಾನಿಸುವ ಜತೆಗೆ ಮುಸ್ಲಿಮೇತರರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡುವ ವಿಷಯ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.















.
.
.
.
.
.
.
.
.
.
