

ಕಾರ್ಕಳ,ಸೆ. 03: ಕಾರ್ಕಳ ಶಾಸಕರು ಹಾಗೂ ಮಾಜಿ ಸಚಿವ ವಿ ಸುನಿಲ್ ಕುಮಾರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಕಾರ್ಕಳ ಕಾಂಗ್ರೆಸ್ಸಿಗರೇ ನಿಮಗೆ ಸ್ವಲ್ಪ ಅದರೂ ರಾಜಕೀಯ ನೈತಿಕತೆ ಇದೆಯೇ ಎನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಿ. ನಿಮ್ಮ ಪಕ್ಷದ ರಾಜ್ಯ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ನಿಮಗೆ ನೈತಿಕತೆ ಹಾಗೂ ತಾಕತ್ತಿದ್ದರೆ ನಿಮ್ಮ ಸರ್ಕಾರದ ವಿರುದ್ಧ ನಿಮ್ಮ ನಾಯಕರುಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಸ್ಟಿಕ್ಕರ್ ಅಭಿಯಾನ ಆರಂಭಿಸಿ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ತಿರುಗೇಟು ನೀಡಿದ್ದಾರೆ.
ನಿಮ್ಮದೇ ಪಕ್ಷದ ಪುತ್ತೂರಿನ ಶಾಸಕ ಅಶೋಕ್ ರೈಯವರು 7% ಕಮಿಷನ್ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರವಾಗಿ ಪತ್ರ ಬರೆದಿರುವುದು ನಿಮ್ಮ ಗಮನಕ್ಕಿಲ್ಲವೇ ? 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದಾಗಿನಿಂದ ರಾಜ್ಯದಲ್ಲಿ ಕಲೆಕ್ಷನ್ ವ್ಯವಸ್ಥೆಯ ಒಂದು ಹೊಸ ಸಂಪ್ರದಾಯ ಪ್ರಾರಂಭವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳ ಮೂಲಕ ಕಮಿಷನ್ ಹಣ ಸಂಗ್ರಹ ಮಾಡಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಮಂತ್ರಿಗಳಿಗೆ ತಲುಪಿಸುವ ವ್ಯವಸ್ಥಿತ ಕಾರ್ಯ ಯಾವುದೇ ಮುಚ್ಚುಮರೆ ಇಲ್ಲದೆ ನಡೆಯುತ್ತಿದೆ. ಇದನ್ನು ನಾವು ಹೇಳುತ್ತಿಲ್ಲ ನಿಮ್ಮ ಸರಕಾರದ ಅಧಿಕಾರಿಗಳೇ ಬಹಿರಂಗವಾಗಿ ಹೇಳುತ್ತಿದ್ದಾರೆ.
ಉದಯಕುಮಾರ್ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಕಲೆಕ್ಷನ್ ಏಜೆಂಟ್ ನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಉಡುಪಿ ಜಿಲ್ಲೆಯ ಕಾಂಗ್ರೆಸ್ ಇತರ ನಾಯಕರುಗಳೇ ಹೇಳುತ್ತಿದ್ದಾರೆ. ಇಂತಹ ಭ್ರಷ್ಟ ವ್ಯವಸ್ತೆಯಲ್ಲಿದ್ದುಕೊಂಡು ಅದನ್ನು ಮರೆಮಾಚಲು ನೀವು ಮಾಡುತ್ತಿರುವ ನಾಟಕ ಕಾರ್ಕಳ ಜನತೆಗೆ ಈಗಾಗಲೇ ಗೊತ್ತಾಗಿದೆ.
ಮಾನ್ಯ ಸುನಿಲ್ ಕುಮಾರ್ ಅವರು ಪ್ರತಿ ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗೃಹಲಕ್ಷ್ಮಿ ಹಗರಣ, ವಾಲ್ಮೀಕಿ ಹಗರಣ, ಶಕ್ತಿ ಯೋಜನೆ ಹಗರಣ, ಮೂಢ ಹಗರಣ ಸೇರಿದಂತೆ ಒಂದೊಂದೇ ಹಗರಣಗಳ ಬಗ್ಗೆ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಈ ನಿಟ್ಟಿನಲ್ಲಿ ನಾಗೇಂದ್ರ ತನ್ನ ಸಚಿವ ಸ್ಥಾನಕ್ಕೆ ಎರಡನೇ ಬಾರಿ ರಾಜೀನಾಮೆ ನೀಡುವಂತೆ ಮಾಡಿತ್ತು. ಇದನ್ನೆಲ್ಲಾ ಮರೆಮಾಚಲು ಯಾವುದೇ ರೀತಿಯ ಭ್ರಷ್ಟಾಚಾರ ಆರೋಪ ಇಲ್ಲದ ನಮ್ಮ ಶಾಸಕರ ವಿರುದ್ಧ ನೀವು ಈ ತರಹದ ಸುಳ್ಳು ಆರೋಪ ಮಾಡುವುದರಿಂದ ನಮ್ಮ ಶಾಸಕರ ಕಾರ್ಯ ವೈಖರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾರ್ಕಳದ ಪ್ರಜ್ಞಾವಂತ ಜನರು ನಿಮ್ಮ ನಾಟಕವನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾರೆ.
ಉದಯಕುಮಾರ್ ಶೆಟ್ಟಿ ಅವರೇ, ನಿಮಗೆ ಕಳಪೆ ಕಾಮಗಾರಿಯ ಪಿತಾಮಹ ಎಂದೇ ಬಿರುದು ಇದೆ. ಹಾಗಾಗಿ ನಿಮಗೆ ಭ್ರಷ್ಟಾಚಾರ ಎಂಬುದು ಬಳುವಳಿಯಾಗಿ ಬಂದಿರಬಹುದು ಹಾಗಂತ ಎಲ್ಲರೂ ನಿಮ್ಮಂತೆ ಎಂದು ಭಾವಿಸುವುದು ಸರಿಯಲ್ಲ.
ನಿನ್ನೆ ನಡೆದ ಕಾಂಗ್ರೆಸ್ಸಿನ ಸ್ಟಿಕರ್ ಅಭಿಯಾನದಲ್ಲಿ ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿಯವರನ್ನು ಸ್ವಪಕ್ಷದವರೇ ಹೊರಗಿಟ್ಟರೆ ? ಅಥವಾ ಸ್ವತಃ ತಾನೆ ಭಾಗವಹಿಸದೇ ಈ ಅಭಿಯಾನದಿಂದ ದೂರ ಉಳಿದರೆ ? ಎಂಬುವುದು ಕಾರ್ಕಳ ಭಾರತೀಯ ಜನತಾ ಪಾರ್ಟಿಗೆ ಹಾಗೂ ಕಾರ್ಕಳದ ಸಮಸ್ತ ಜನತೆಗೆ ಸಂಶಯ ಮೂಡಿದೆ ಇದನ್ನು ಶೀಘ್ರ ಬಹಿರಂಗ ಪಡಿಸುವಂತೆ ನವೀನ್ ನಾಯಕ್ ಆಗ್ರಹಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
