ಬೆಂಗಳೂರು: ಅಲ್ಪಸಂಖ್ಯಾತರ ಮೇಲಿನ ಪ್ರಕರಣಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಸರ್ಕಾರ ಪೊಲೀಸರಿಗೆ ನಿರ್ದೇಶನ ನೀಡಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಬಾಂಬ್ ಸ್ಪೋಟ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಮೇಲಿನ ಗಂಭೀರ ಪ್ರಕರಣಗಳನ್ನು ಮುಚ್ಚಿ ಹಾಕಲು ಮತ್ತು ಬಹುಸಂಖ್ಯಾತ ಸಮುದಾಯದವರ ವಿರುದ್ಧ ಪ್ರಕರಣಗಳು ದಾಖಲಾದಾಗ ತಕ್ಷಣವೇ ಕಠಿಣಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸರಕಾರದಿಂದ ಸ್ಪಷ್ಟ ಸೂಚನೆ ಇದೆ. ಕರ್ನಾಟಕದ ಪ್ರಜೆಯಾಗಿ ಈ ಬೆಳವಣಿಗೆಗಳಿಂದ ದುಃಖಿತನಾಗಿದ್ದೇನೆ. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಗೂ ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಗಳು ಸಾಬೀತಾದರೆ, ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ವಿಸರ್ಜಿಸುತ್ತಾರೆಯೇ? ಎಂದು ಪ್ರಶ್ನಿಸಿದರು.ಎರಡೂ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಭಯೋತ್ಪಾದಕರ ಜತೆ ನಂಟು ದೃಢಪಟ್ಟರೆ ಸರ್ಕಾರದಲ್ಲಿ ಎಲ್ಲರೂ ರಾಜೀನಾಮೆ ಸಲ್ಲಿಸುತ್ತಾರೆಯೇ? ವ್ಯಾವಹಾರಿಕ ದ್ವೇಷದ ಪರಿಣಾಮವಾಗಿ ಕೆಫೆಯಲ್ಲಿ ಬಾಂಬ್ ಸ್ಫೋಟ ನಡೆದಿದೆ ಎಂದು ಯಾರು ಮಾತನಾಡಿದ್ದಾರೆ? ಈ ಹೇಳಿಕೆಗಳು ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರಣೆ ನೀಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಬಾಂಬ್ ಸ್ಪೋಟ ಪ್ರಕರಣದಲ್ಲಿ ಗೃಹ ಸಚಿವರು ಒತ್ತಡದಲ್ಲಿದ್ದಾರೆ, ಈ ಪ್ರಕರಣವನ್ನೇ ಮುಚ್ಚಿಹಾಕಲು ಸರ್ಕಾರದ ಮಟ್ಟದಲ್ಲಿ ಭಾರೀ ತಂತ್ರಗಾರಿಕೆ ನಡೆಯುತ್ತಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ನೊಬೆಲ್ ಪ್ರಶಸ್ತಿ ನೀಡಬೇಕು, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡದಲ್ಲಿ ಸಿಲುಕಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರವು ಸತ್ಯಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
.ಖಾಸಗಿ FSL ವರದಿಯಲ್ಲಿ ಪಾಕ್ ಪರ ಘೋಷಣೆಗಳು ಕೇಳಿ ಬಂದಿದ್ದು ಸಾಬೀತಾಗಿದೆ. ಸರ್ಕಾರಕ್ಕೆ ಅಧಿಕೃತ FSL ವರದಿ ಕೂಡ ಬಂದಿದೆ. ಯಾರನ್ನಾದರೂ ರಕ್ಷಿಸಲು ರಾಜ್ಯ ಸರ್ಕಾರ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆಯೇ ಎಂದು ಅಶೋಕ್ ಪ್ರಶ್ನಿಸಿದರು. ವಿಧಾನಸೌಧದ ಆವರಣದಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂಬ ಹೇಳಿಕೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ವ್ಯಾಪಾರ ವೈಷಮ್ಯದಿಂದಲೇ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಮಂಗಳೂರು ಕುಕ್ಕರ್ ಸ್ಫೋಟದ ಸಂಚುಕೋರನನ್ನು ನಿರಪರಾಧಿ ಎಂದು ಬಣ್ಣಿಸಿದ್ದಾರೆ. ಸರ್ಕಾರ ಈವರೆಗೂ FSL ವರದಿಯನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಿಲ್ಲ.ಈ ಪ್ರಕರಣದಲ್ಲಿ ಅಮಾಯಕರ ಮೇಲೆ ಆರೋಪ ಹೊರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಶೋಕ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ಸತ್ಯದ ಮೇಲೆ ಪ್ರಮಾಣ ಮಾಡಿದ್ದೀರಿ, ಅಧಿಕಾರ ಸ್ವೀಕರಿಸಿದ ನಂತರ ಸತ್ಯವನ್ನು ತುಳಿದರೆ ಅದು ನಿಮ್ಮ ಘನತೆಗೆ ತಕ್ಕುದಲ್ಲ. ಪಕ್ಷವು ದೇಶಕ್ಕಿಂತ ಮೇಲುಗೈ ಸಾಧಿಸಿದೆಯೇ? ರಾಷ್ಟ್ರೀಯ ಹಿತಾಸಕ್ತಿಗಿಂತ ಮತ ಬ್ಯಾಂಕ್ ರಾಜಕಾರಣ ದೊಡ್ಡದೇ? ರಾಷ್ಟ್ರವನ್ನು ಉಳಿಸಿದರೆ ನಿಮ್ಮ ಪಕ್ಷ, ಮತ, ಅಧಿಕಾರ ಉಳಿಯುತ್ತದೆ. ನಿಮ್ಮಲ್ಲಿ ದೇಶಪ್ರೇಮವಿದ್ದರೆ ಸಮಯ ವ್ಯರ್ಥ ಮಾಡದೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಪ್ರಕರಣದ FSL ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿ ಎಂದು ಅಶೋಕ್ ಸವಾಲೆಸೆದಿದ್ದಾರೆ.