ಮಂಡ್ಯ: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆ ಪೂರ್ವ ನಿಯೋಜಿತ ಘಟನೆ ಎಂದು ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಆರೋಪ ಮಾಡುತ್ತಿವೆ. ಈ ನಡುವೆ ಗಲಾಟೆ ನಡೆಯುವ ವೇಳೆ ಸ್ಥಳೀಯರು ರಕ್ಷಣೆ ಮಾಡುವಂತೆ ಅಂಗಲಾಚಿ ಬೇಡಿಕೊಂಡರೂ ಪೊಲೀಸರು ಅಸಹಾಯಕರಂತೆ ನಿಂತು ನೋಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಿಡಿಗೇಡಿಗಳು ಮಂಡ್ಯ ಸರ್ಕಲ್ ನ ಸಾಧನಾ ಟೆಕ್ಸ್ ಟೈಲ್ ಅಂಗಡಿಯಲ್ಲಿನ ಸಿಸಿ ಕ್ಯಾಮೆರಾವನ್ನು ಹೊಡೆದು ಹಾಕಿ ಬೆಂಕಿ ಹಚ್ಚುತ್ತಿದ್ದರು. ಈ ವೇಳೆ ಸ್ಥಳೀಯರು ಮಾಲೀಕ 30 ಲಕ್ಷ ರೂ. ಬಂಡವಾಳ ಹಾಕಿ ಬಟ್ಟೆ ಅಂಗಡಿ ತೆರೆದಿದ್ದಾನೆ ರಕ್ಷಣೆ ಮಾಡಿ, ಬಟ್ಟೆ ಅಂಗಡಿ ಉಳಿಸಿ ಎಂದು ಪೊಲೀಸರ ಮುಂದೆ ಅಂಗಲಾಚಿ ಬೇಡಿಕೊಂಡಿದ್ದಾರೆ. ಸ್ಥಳೀಯರ ಮಾತಿಗೆ ಕಿವಿಗೊಡದ ಪೊಲೀಸರು, ಸುಮ್ಮನೆ ನೋಡುತ್ತ ನಿಂತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಕೊನೆಗೆ ದುಷ್ಕರ್ಮಿಗಳು ಪೊಲೀಸರು, ಸ್ಥಳೀಯರ ಕಣ್ಣು ಮುಂದೆಯೇ ಬಟ್ಟೆ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ.
ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆ ಹಿಂದೆ ನಿಷೇಧಿತ ಪಿಎಫ್ಐ ಕೇವಾಡವಿದೆ ಎಂಬ ಅನುಮಾನ ವ್ಯಕ್ತವಾಗಿದೆ. ನಾಗಮಂಗಲ ಕೋಮುಗಲಭೆ ಸಂಬAಧ 74 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಎಫೈಆರ್ ನಲ್ಲಿ ಎ44 ಮತ್ತು ಎ61 ಕೇರಳ ಮೂಲದವರು ಎಂದು ತಿಳಿದು ಬಂದಿದೆ. ಎ44 ಯೂಸುಫ್, ಎ61 ನಾಸೀರ್ ಇಬ್ಬರೂ ಕೇರಳದ ಮಲಪ್ಪುರಂ ನಿವಾಸಿಗಳು. ಇವರು ನಿಷೇಧಿತ ಪಿಎಫ್ಐ ಸಂಘಟನೆ ಸದಸ್ಯರು ಎಂಬ ಅನುಮಾನ ವ್ಯಕ್ತವಾಗಿದೆ. ಯೂಸುಫ್ ಮತ್ತು ನಾಸೀರ್ ಕೆಲ ದಿನಗಳಿಂದ ನಾಗಮಂಗಲದಲ್ಲಿ ವಾಸವಿದ್ದರು. ಈ ಗಲಭೆ ಹಿಂದೆ ಇವರ ಕೈವಾಡವಿರುವ ಅನುಮಾನ ವ್ಯಕ್ತವಾಗಿದೆ.
