Share this news

 

 

 

ಉಡುಪಿ: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ನಂತರ ಕರ್ನಾಟಕ ಕರಾವಳಿಯಲ್ಲಿ ಕರಾವಳಿ ಕಾವಲು ಪೊಲೀಸರ ತಂಡ ಕಟ್ಟೆಚ್ಚರ ವಹಿಸಿದೆ. ಕರಾವಳಿ ಮೂಲಕ ಭಯೋತ್ಪಾದಕ ಚಟುವಟಿಕೆ ಸಾಧ್ಯತೆಯ ಅನುಮಾನದ ಕಾರಣ ಕರಾವಳಿ ಕಾವಲು ಪೊಲೀಸರು ಕಣ್ಗಾವಲು ಹೆಚ್ಚಿಸಿದ್ದಾರೆ. ಸಮುದ್ರ ಮಾರ್ಗದ ಮೂಲಕ ಶತ್ರುಗಳು ಒಳ ನುಗ್ಗದಂತೆ ತಡೆಯಲು ಬೋಟ್‌ಗಳ ತಪಾಸಣೆ ತೀವ್ರಗೊಳಿಸಲಾಗಿದೆ. ಉಡುಪಿ ಜಿಲ್ಲೆಯ ಗಂಗೊಳ್ಳಿ ಕರಾವಳಿ ಪೊಲೀಸರಿಂದ ಆಳ ಸಮುದ್ರದಲ್ಲಿ ಗಸ್ತು ಕಾರ್ಯಚರಣೆ ಆರಂಭಿಸಲಾಗಿದೆ. ಶಸ್ತ್ರಸನ್ನದ್ಧರಾಗಿ ಕರಾವಳಿ ಕಾವಲು ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ.

ಅಷ್ಟೇ ಅಲ್ಲದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಕಾವಲು ಪಡೆ, ಭಾರತೀಯ ಕೊಸ್ಟ್ ಗಾರ್ಡ್, ನೌಕಾ ನೆಲೆ ಸಿಬ್ಬಂದಿ ಹಾಗೂ ಜಿಲ್ಲಾ ಪೊಲೀಸ್ ಸಕ್ರಿಯರಾಗಿದ್ದಾರೆ. ಒಂದು ಕಡೆ ಅರಬ್ಬೀ ಸಮುದ್ರ, ಇನ್ನೊಂದು ಕಡೆ ದೇಶದ ದೊಡ್ಡ ನೌಕಾ ನೆಲೆ. ಮತ್ತೊಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಬರುವ ದೇಶ ವಿದೇಶಿಗರು. ಈ ಎಲ್ಲ ಸೂಕ್ಷ್ಮ ಕಾರಣಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಸಮುದ್ರಾದಳಕ್ಕೆ ಹೋಗುವ ಮೀನುಗಾರಿಕೆ ಬೋಟ್ ಹಾಗೂ ಹಡಗುಗಳ ಮೇಲೆ ಕಣ್ಣಿಡಲಾಗಿದ್ದು, ಕರಾವಳಿ ಕಾವಲು ಪಡೆ ಹಾಗೂ ಭಾರತಿಯ ಕೊಸ್ಟಲ್ ಗಾರ್ಡ್ ಸಿಬ್ಬಂದಿ ಸಮುದ್ರದಾಳಕ್ಕೆ ಹೋಗಿ ಪ್ರತಿಯೊಂದು ಬೋಟ್‌ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.ಬಂದರು ಹಾಗೂ ಸಮುದ್ರದಾಳದಲ್ಲಿ ಯಾವುದೇ ಅನುಮಾನಸ್ಪದ ಹಾಗೂ ಬೇರೆ ಕಡೆಯ ಬೋಟ್ ಕಂಡು ಬಂದರೆ ತಕ್ಷಣ ಮಾಹಿತಿ ತಿಳಿಸುವಂತೆ ಮೀನುಗಾರರಿಗೆ ಪೊಲೀಸರ ತಂಡ ಮನವಿ ಮಾಡಿಕೊಂಡಿದೆ.

ದೇಶದ ಅತಿ ದೊಡ್ಡ ಕದಂಬ ನೌಕಾ ನೆಲೆ ಕಾರವಾರ ಬಳಿ ಇದೆ. ಹೀಗಾಗಿ ಕಾರವಾರ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಬರುವ ವಲಸಿಗರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ನೌಕಾನೆಲೆ ಭದ್ರತೆ ವಿಚಾರವಾಗಿ ಕೇಂದ್ರ ಗೃಹ ಇಲಾಖೆಯ ಸೂಚನೆಯ ಪ್ರಕಾರ, ನೌಕಾನೆಲೆಯ ಕೂಗಳತೆ ದೂರದಲ್ಲಿನ ರವೀಂದ್ರನಾಥ್ ಠಾಗೋರ ಕಡಲ ತೀರದಲ್ಲಿ ಮೇ 4 ರಂದು ನಡೆಯಬೇಕಿದ್ದ ಪ್ರಸಿದ್ಧ ಕರಾವಳಿ ಉತ್ಸವವನ್ನು ಮುಂದೂಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.

 

 

 

 

 

 

 

 

 

Leave a Reply

Your email address will not be published. Required fields are marked *