ಬೆಂಗಳೂರು: ಇಡೀ ರೋಮ್ ದೇಶಕ್ಕೆ ಬೆಂಕಿ ಬಿದ್ದಾಗ ಅಲ್ಲಿನ ರಾಜ ನೀರೋ ಪಿಟೀಲು ಬಾರಿಸುತ್ತಿದ್ದನಂತೆ, ರಾಜಧಾನಿ ಬೆಂಗಳೂರು ಮಳೆಯಿಂದ ಮುಳುಗಿ ಜನ ತತ್ತರಿಸುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಾಧನಾ ಸಮಾವೇಶ ನಡೆಸುತ್ತಿದೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಟೀಕಾಪ್ರಹಾರ ಮಾಡಿದ್ದಾರೆ.
ಭಾರೀ ಮಳೆಯಿಂದಾಗಿ ಗ್ರೇಟರ್ ಬೆಂಗಳೂರು ಇದೀಗ ವಾಟರ್ ನಲ್ಲಿ ಮುಳುಗಿರುವಾಗ ನಾಗರಿಕ ಸಂಕಷ್ಟಕ್ಕೆ ನೆರವಾಗಬೇಕಿದ್ದ ಕಾಂಗ್ರೆಸ್ ಶಾಸಕರು, ಸಚಿವರು ಸರ್ಕಾರದ ಸಾಧನಾ ಸಮಾವೇಶಕ್ಕೆ ಹೊಸಪೇಟೆಗೆ ದೌಡಾಯಿಸುತ್ತಿದ್ದಾರೆ.
ಬೆಂಗಳೂರಿನ ಜನರು ಸಂಕಷ್ಟದಲ್ಲಿರುವಾಗ ಈ ಸಂಭ್ರಮ ಬೇಕೇ ? ಈ ದುರಾಡಳಿತವನ್ನು ನಿಮ್ಮ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸುತ್ತಾರೆಯೇ ? ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಕಳೆದ ಎರಡು ವರ್ಷದಲ್ಲಿ ವಿನಿಯೋಗಿಸಿದ ಹಣ ಎಷ್ಟು ಎಂದು ಮೊದಲು ಶ್ವೇತಪತ್ರ ಪ್ರಕಟಿಸಿ ಎಂದು ಸುನಿಲ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.