
ಕಾರ್ಕಳ, ಫೆ,14: ಬೋಳ ವ್ಯವಸಾಯ ಸಹಕಾರಿ ಸೇವಾ ಸಂಘದ ನಿರ್ದೇಶಕ ಸ್ಥಾನದಿಂದ ಬೋಳ ಸದಾಶಿವ ಶೆಟ್ಟಿಯವರನ್ನು ವಜಾಗೊಳಿಸಿದ್ದ ಕುಂದಾಪುರ ಉಪ ವಿಭಾಗದ ಸಹಾಯಕ ನಿಬಂಧಕರ ಆದೇಶವನ್ನು ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ. ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಸಂಘದ ನಿರ್ದೆಶಕರಾಗಿರುವ ಮುರುಳೀಧರ ಶರ್ಮ, ಜಯರಾಮ ಸಾಲ್ಯಾನ್, ಪ್ರವೀಣ್ ಸಾಲ್ಯಾನ್,ಸೂರ್ಯಕಾಂತ ಶೆಟ್ಟಿ ಮತ್ತಿತರರು ಕುಂದಾಪುರ ಉಪ ವಿಭಾಗದ ಸಹಾಯಕ ನಿಬಂಧಕರಿಗೆ ದೂರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸಹಾಯಕ ನಿಬಂಧಕರು ಅಂತಿಮವಾಗಿ ಬೋಳ ಸದಾಶಿವ ಶೆಟ್ಟಿಯವರು ಅವ್ಯವಹಾರ ನಡೆಸಿದ್ದು ಸಾಬೀತಾಗಿದೆ ಎಂದು ತಮ್ಮ ಆದೇಶದಲ್ಲಿ ಉಲ್ಲೇಖಿಸಿ ಸದಾಶಿವ ಶೆಟ್ಟಿಯವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿದ್ದರು.
ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಆದೇಶವನ್ನು ಪ್ರಶ್ನಿಸಿ ಬೋಳ ಸದಾಶಿವ ಶೆಟ್ಟಿಯವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರಾದ ಅಶೋಕ್ ಎಸ್ .ಕಿಣಗಿಯವರ ನ್ಯಾಯಪೀಠ ಪ್ರತಿವಾದಿಗಳು ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲವೆAದು ಮನಗಂಡು ಅಂತಿಮವಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಬೋಳ ಸದಾಶಿವ ಶೆಟ್ಟಿಯವರನ್ನು ವಜಾಗೊಳಿಸಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ ಆದೇಶಿಸಿದೆ. ಹಾಗೂ ಅರ್ಜಿದಾರರ ಹಾಗೂ ಇತರೇ ಪ್ರತಿವಾದಿಗಳ ಮೇಲ್ಮನವಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಉಡುಪಿ ಜಿಲ್ಲಾ ಉಪ ನಿಬಂಧಕರಿಗೆ ಸೂಚಿಸಿದೆ.
ಬೋಳ ಸದಾಶಿವ ಶೆಟ್ಟಿಯವರ ಪರವಾಗಿ ಹೈಕೋರ್ಟ್ ಖ್ಯಾತ ವಕೀಲರಾದ ದೇವಿಪ್ರಸಾದ್ ಶೆಟ್ಟಿಯವರು ವಾದಿಸಿದರು.

.
.
.
.
.
.
.
.
.
.
