ಕಾರ್ಕಳ: 2025-26ನೇ ಸಾಲಿನ ಬ್ರಾಂಚ್ ಅಸೋಸಿಯೇಷನ್ ಮತ್ತು ವಿದ್ಯಾರ್ಥಿ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ನಿಟ್ಟೆಯ ಎನ್ಎಂಎಎಂಐಟಿಯ ಬಿ.ಸಿ.ಆಳ್ವ ಕ್ರೀಡಾ ಸಂಕೀರ್ಣದ ಸದಾನಂದ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಈ ಕಾರ್ಯಕ್ರಮವನ್ನು ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ಇಂಡಿಯಾದ ಹಿರಿಯ ವ್ಯವಸ್ಥಾಪಕ ಮತ್ತು ಎನ್ಎಂಎಎಂಐಟಿಯ 2001-2005 ರ ಬ್ಯಾಚ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ನ ಹಳೆಯ ವಿದ್ಯಾರ್ಥಿ ವಿಜೇಶ್ ಕಾಮತ್ ಉದ್ಘಾಟಿಸಿ ಮಾತನಾಡಿ, ‘ವಿದ್ಯಾರ್ಥಿಗಳ ವೃತ್ತಿಜೀವನವನ್ನು ರೂಪಿಸುವಲ್ಲಿ ನಾವೀನ್ಯತೆ, ನಾಯಕತ್ವ ಮತ್ತು ತಂಡದ ಕೆಲಸದ ಮಹತ್ವ ಬಹಳಷ್ಟು ಇದೆ. ವಿವಿಧ ಸವಾಲುಗಳನ್ನು ಜೀವನದಲ್ಲಿನ ಅವಕಾಶಗಳಾಗಿ ರೂಪಿಸಿಕೊಳ್ಳಬಹುದಾಗಿದೆ. ವಿವಿಧ ಕೌಶಲ್ಯಗಳನ್ನು ಹೆಚ್ಚಿಸುವುದರೊಂದಿಗೆ ನಾವು ಸಾಮಾಜಿಕ ಸಂಪರ್ಕಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ’ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್ಎಂಎಎಂಐಟಿ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣ್ಕರ್, ಇಂದಿನ ಕ್ರಿಯಾತ್ಮಕ ಜಗತ್ತಿನಲ್ಲಿ ನಿರಂತರ ಕಲಿಕೆ ಮತ್ತು ಕೌಶಲ್ಯ ಅಭಿವೃದ್ಧಿಯ ಅಗತ್ಯ ಹೆಚ್ಚುತ್ತಿದೆ. ಸಂಘ ನೇತೃತ್ವದ ಉಪಕ್ರಮಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವಲ್ಲಿ ವಿವಿಧ ಇಲಾಖೆಗಳ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು ಮತ್ತು ಸಮಗ್ರ ಬೆಳವಣಿಗೆಗಾಗಿ ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ 15 ವಿಭಾಗಗಳ ವಿದ್ಯಾರ್ಥಿ ಪದಾಧಿಕಾರಿಗಳಿಗೆ ಬ್ಯಾಡ್ಜ್ ಗಳನ್ನು ವಿತರಿಸಲಾಯಿತು. ಸ್ಟೂಡೆಂಟ್ ವೆಲ್ಫೇರ್ ವಿಭಾಗದ ಡೀನ್ ಡಾ.ನರಸಿಂಹ ಕೆ.ಬೈಲ್ಕೇರಿ ನೂತನ ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಎನ್ಎಂಎಎಂಐಟಿ ಉಪಪ್ರಾಂಶುಪಾಲ ಡಾ.ನಾಗೇಶ್ ಪ್ರಭು ಸ್ವಾಗತಿಸಿ, ವಿದ್ಯಾರ್ಥಿನಿ ಐಶ್ವರ್ಯಾ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಮಯೂರ್ ಪಿ ಮತ್ತು ಶರಣ್ಯ ಗಣೇಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.