ಕಾರ್ಕಳ: ಎನ್ ಎಸ್ ಎಸ್ ಘಟಕದ 2024 – 25 ನೇ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಜುಲೈ 31ರಂದು ಕಾರ್ಕಳ ಕ್ರಿಯೇಟಿವ್ ಕಾಲೇಜಿನ ‘ಸಪ್ತಸ್ವರ’ ವೇದಿಕೆಯಲ್ಲಿ ಜರುಗಿತು.
ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಜಯಶಂಕರ್ ಕಂಗ್ಗಣ್ಣಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ‘ಎನ್ಎಸ್ಎಸ್ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಅರಳಿಸುವುದರ ಜೊತೆಗೆ ಚಾರಿತ್ರ್ಯ ಬೆಳೆಸುತ್ತದೆ. ಸದ್ಗುಣಗಳನ್ನು ಹೊಂದಿರುವ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವಲ್ಲಿ ಎನ್ಎಸ್ಎಸ್ ಪಾತ್ರ ಅತಿಮುಖ್ಯ’ ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಲ್ಲಿ ಓರ್ವರಾದ ಡಾ. ಗಣನಾಥ ಶೆಟ್ಟಿ ಬಿ ರವರು ‘ಪ್ರೀತಿ, ತ್ಯಾಗ, ಶಾಂತಿ, ಸಹ ಬಾಳ್ವೆ, ಬಂಧುತ್ವ ಮುಂತಾದ ಉದಾತ್ತ ಗುಣಗಳನ್ನು ಮನುಷ್ಯ ಹೊಂದಿರಬೇಕು. ಮಮತೆ ಮತ್ತು ಮಾನವತೆಯನ್ನು ಬೆಳೆಸಿಕೊಳ್ಳಬೇಕು. ಸ್ವಚ್ಛತೆ, ನೈರ್ಮಲ್ಯ, ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದಕ್ಕೆ ಎನ್ ಎಸ್ ಎಸ್ ಘಟಕ ಪೂರಕವಾಗಿ ಕೆಲಸ ಮಾಡುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎನ್ಎಸ್ಎಸ್ ಸಂಯೋಜನಾಧಿಕಾರಿಗಳಾದ, ಅರ್ಥಶಾಸ್ತ್ರ ಉಪನ್ಯಾಸಕರೂ ಆಗಿರುವ ಉಮೇಶ್, ಬೋಧಕ ವರ್ಗದವರು, ಬೋಧಕೇತರ ವೃಂದದವರು, ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿಯರಾದ ವಜ್ರ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು. ಕೀರ್ತನ ವಂದನಾರ್ಪಣೆಗೈದರು.
`