ಕಾರ್ಕಳ, ಆ.22: ನಕಲಿ ಚಿನ್ನಾಭರಣವನ್ನು ಅಡಮಾನ ಇಟ್ಟು ಕಾರ್ಕಳದ ಗೋಕರ್ಣನಾಥ ಕೋ-ಅಪರೇಟಿವ್ ಬ್ಯಾಂಕಿಗೆ ಬರೋಬ್ಬರಿ 10.58 ಲಕ್ಷ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.ಈ ಪ್ರಕರಣದ ಕುರಿತು ನಕಲಿ ಚಿನ್ನ ಅಡಮಾನ ಇರಿಸಿದ ದಂಪತಿ ನಾಗರಾಜ ಹಾಗೂ ಆತನ ಪತ್ನಿ ರೇಣುಕಾ ಹಾಗೂ ಚಿನ್ನದ ಅಸಲಿಯತ್ತು ಪರೀಕ್ಷೆ ಮಾಡುವ ಅಕ್ಕಸಾಲಿಗ ಸತೀಶ್ ಆಚಾರ್ಯ ಎಂಬವರ ವಿರುದ್ಧ ಬ್ಯಾಂಕ್ ಮ್ಯಾನೇಜರ್ ಲಕ್ಷ್ಮಣ್ ಶೇಟ್ ಎಂಬವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಕಾರ್ಕಳದ ಗೋಕರ್ಣನಾಥ ಕೋ-ಅಪರೇಟಿವ್ ಬ್ಯಾಂಕಿಗೆ ಆರೋಪಿ ದಂಪತಿಯಾದ ನಾಗರಾಜ ಹಾಗೂ ಆತನ ಪತ್ನಿ ರೇಣುಕಾ .ಬಿ ಎಂಬವರು ಕಳೆದ 2024 ಅ.25 ರಿಂದ 2025 ರ ಸೆ. 30ರ ಅವಧಿಯಲ್ಲಿ ಹಂತಹಂತವಾಗಿ ಪದೇಪದೇ ತಮ್ಮಲ್ಲಿದ್ದ ನಕಲಿ ಚಿನ್ನಾಭರಣಗಳನ್ನು ಗೋಕರ್ಣನಾಥ ಬ್ಯಾಂಕ್ ನಲ್ಲಿ ಅಡವಿರಿಸಿ ಸಾಲ ಪಡೆಯಲು ಬಂದಿದ್ದರು.ಈ ಸಂದರ್ಭದಲ್ಲಿ ಚಿನ್ನಾಭರಣಗಳ ಅಸಲಿಯತ್ತು ಪರೀಕ್ಷೆಗೆ ಬ್ಯಾಂಕಿನ ಅಧಿಕೃತ ಚಿನ್ನ ಪರೀಕ್ಷಕ ಸತೀಶ್ ಆಚಾರ್ಯಯವರು ಪರೀಕ್ಷೆ ನಡೆಸಿ ಇದು ಅಸಲಿ ಚಿನ್ನ ಎಂದು ದೃಢೀಕರಿಸಿದ ಹಿನ್ನೆಲೆಯಲ್ಲಿ ಅವರಿಗೆ ಚಿನ್ನಾಭರಣಗಳ ಮೇಲೆ ಸಾಲ ನೀಡಲಾಗಿತ್ತು.
ಈ ಪೈಕಿ ಆರೋಪಿ ನಾಗರಾಜನ ಸಾಲದ ಖಾತೆಯಿಂದ 5.26 ಲ.ರೂ ಹಾಗೂ ಪತ್ನಿ ರೇಣುಕಾ ತನ್ನಲ್ಲಿದ್ದ ನಕಲಿ ಚಿನ್ನಾಭರಣ ಅಡಮಾನ ಇಟ್ಟು 5.32 ಲ.ರೂ ಸಾಲ ಪಡೆದಿದ್ದಳು.ಇಬ್ಬರು ಆರೋಪಿಗಳು ಒಟ್ಟು 10.58 .ಲ.ರೂ ವಂಚಿಸಿದ್ದಾರೆ.
ಬರೋಬ್ಬರಿ 1 ವರ್ಷದಿಂದ ಸ್ವಲ್ಪವೂ ಅನುಮಾನ ಬರದಂತೆ ಸಾಕಷ್ಟು ಬಾರಿ ಚಿನ್ನದ ಮೇಲೆ ಸಾಲ ಪಡೆದ ದಂಪತಿಯ ಮೋಸದ ಜಾಲ ಕೊನೆಗೂ ಬಯಲಾಗಿದೆ.
ಆರೋಪಿ ನಾಗರಾಜನ ಪತ್ನಿ ರೇಣುಕಾ ಅ.9 ರಂದು ಮತ್ತೆ ಬ್ಯಾಂಕಿಗೆ ಬಂದು ತನ್ನ ಗಂಡ ಅಡಮಾನ ಇಟ್ಟಿದ್ದ ಚಿನ್ನವನ್ನು ಮರು ಅಡಮಾನ ಇರಿಸುವುದಾಗಿ ಹೆಚ್ಚುವರಿ 1 ಲಕ್ಷ ರೂಪಾಯಿ ಸಾಲಕ್ಕೆ ಬೇಡಿಕೆ ಇಟ್ಟಿದ್ದಳು. ಪದೇಪದೇ ಚಿನ್ನಾಭರಣಗಳನ್ನು ಅಡಮಾನ ಇರಿಸಿ ಸಾಲ ಪಡೆಯುತ್ತಿರುವ ವಿಚಾರ ತಿಳಿದು ಅನುಮಾನಗೊಂಡ ಬ್ಯಾಂಕ್ ಮ್ಯಾನೇಜರ್ ಲಕ್ಷ್ಮಣ ಶೇಟ್ ಅವರು, ನಾಗರಾಜ ಅಡಮಾನ ಇಟ್ಟ ಸಾಲದ ಸಂಖ್ಯೆ 19276 ರ ಚಿನ್ನಾಭರಣಗಳನ್ನು ಮರು ಪರಿಶೀಲಿಸಲು ಸತೀಶ್ ಆಚಾರ್ಯ ನಿಗೆ ತಿಳಿಸಿದಾಗ ಆ ಚಿನ್ನದ ಎರಡು ಗುಂಡುಗಳನ್ನು ಕರಗಿಸಿ ಅದನ್ನು ಭಾರತ್ ಟೆಸ್ಟಿಂಗ್ ಸೆಂಟರ್ ನಲ್ಲಿ ಪರೀಕ್ಷಿಸಿದಾಗ ಅದು ನಕಲಿ ಆಭರಣ ಎಂಬ ದೃಢಪಟ್ಟಿದೆ. ಇದರಿಂದ ಅನುಮಾನಗೊಂಡ ಮ್ಯಾನೇಜರ್ ಆರೋಪಿಗಳು ಅಡಮಾನ ಇರಿಸಿದ ಎಲ್ಲಾ ಆಭರಣಗಳನ್ನು ಪರೀಕ್ಷಿಸಿದಾಗ ಅದು ನಕಲಿ ಆಭರಣ ಎಂದು ದೃಢವಾಗಿದೆ.
ಈ ವಂಚನೆ ಪ್ರಕರಣದಲ್ಲಿ ಬ್ಯಾಂಕಿನ ಚಿನ್ನ ಪರೀಕ್ಷಕ ಸತೀಶ್ ಆಚಾರ್ಯ ಕೂಡ ದಂಪತಿ ಜೊತೆ ಶಾಮೀಲಾಗಿ ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ನಂಬಿಸಿದ್ದ. ಈ ಹಿನ್ನೆಲೆಯಲ್ಲಿ ಬ್ಯಾಂಕಿಗೆ ವಂಚಿಸಿದ ಈ ಮೂವರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.