ಕಾರ್ಕಳ :ಐತರೇಯ ಉಪನಿಷತ್ ಮೂರು ಅಧ್ಯಾಯಗಳಿರುವ ಸಣ್ಣ ಉಪನಿಷತ್ ಆದರೂ ಆತ್ಮಜ್ಞಾನವನ್ನು ಬೋಧಿಸುವ ಮಹತ್ವದ ಉಪನಿಷತ್ತಾಗಿದೆ ಎಂದು ಸಂಸ್ಕೃತ ವಿದ್ವಾಂಸರು ಹಾಗೂ ಪ್ರಾಧ್ಯಾಪಕರೂ ಆಗಿರುವ ಅನೀಶ ಮುಳಿಯಾಲ ತಿಳಿಸಿದರು.
ಅವರು ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ಜುಲೈ 6ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ನ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಉಪನ್ಯಾಸ ಅರಿವು ತಿಳಿವು ಕಾರ್ಯಕ್ರಮದಲ್ಲಿ ಐತರೇಯ ಉಪನಿಷತ್ ಇದರ ಕುರಿತು ಉಪನ್ಯಾಸ ನೀಡಿದರು.
ಸಮುದ್ರದ ಅಲೆಗಳಂತೆ ಪಂಚೇಂದ್ರಿಯಗಳ ಬಯಕೆಗಳಿಗೆ ಕೊನೆಯೆಂಬುದಿಲ್ಲ. ಯೋಗ್ಯ ಗುರುವಿನ ಮಾರ್ಗದರ್ಶನ ದೊರಕಿದಲ್ಲಿ ಪೂರ್ಣಜ್ಞಾನವೆಂಬ ಹಡಗನ್ನೇರಿ ಸಂಸಾರವೆಂಬ ಸಾಗರದಿಂದ ಪಾರಾಗಿ ದಡಸೇರಿ ಮೋಕ್ಷ ಪದವನ್ನು ಪಡೆಯಬಹುದಾಗಿದೆ. ಅಂತಃಕರಣ ರೂಪದಲ್ಲಿ ಪರಮಾತ್ಮ ನಮ್ಮೊಳಗಿದ್ದು ಆತನ ಉಪಾಸನೆಯಿಂದ ಆತ್ಮಜ್ಞಾನವನ್ನು ಹೊಂದಿ ಮುಕ್ತರಾಗುವ ಮಾರ್ಗವನ್ನು ಉಪನಿಷತ್ತು ನಮಗೆ ತೋರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್, ಕಾರ್ಕಳ ತಾಲೂಕು ಹಿರಿಯ ನಾಗರಿಕರ ಸಂಘದ ಅಧ್ಯಕ್ಷರಾದ ಕಮಲಾಕ್ಷ ಕಾಮತ್, ಉಪಾಧ್ಯಕ್ಷರಾದ ಮೋಹನದಾಸ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪೂರ್ಣ ಪ್ರಾಯೋಜಕತ್ವವನ್ನು ಕಾರ್ಕಳ ತಾಲೂಕು ಹಿರಿಯ ನಾಗರಿಕರ ಸಂಘವು ವಹಿಸಿಕೊಂಡಿದ್ದು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಗೀತಾ ಜಿ. ಮಲ್ಯ ಪ್ರಾರ್ಥಿಸಿ ಜಗದೀಶ ಗೋಖಲೆಯವರು ಅತಿಥಿಗಳನ್ನು ಪರಿಚಯಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಪ್ರದೀಪ್ ನಾಯಕ್ ವಂದಿಸಿದರು.ಶೈಲಜಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು
