Share this news

ಕಾರ್ಕಳ: ಆನೆಕೆರೆ ಬಳಿಯ ಬಫರ್ ಝೋನ್ ವ್ಯಾಪ್ತಿಯಲ್ಲಿ ಜಾಗವನ್ನು ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಕಟ್ಟಡಕ್ಕೆ ನಿಯಮ ಮೀರಿ ಡೋರ್ ನಂಬರ್ ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆಯ ಸುರ್ಪದಿಯಲ್ಲಿರುವ ಜಾಗದಲ್ಲಿ ನಿರ್ಮಿಸಲಾಗಿರುವ ಕಟ್ಟಡಕ್ಕೆ ಲೈಸನ್ಸ್ ನೀಡಬಾರದು ಎನ್ನುವ ಆಕ್ಷೇಪಣೆ ಸಲ್ಲಿಕೆಯಾಗಿತ್ತು. ಆದರೆ ಸಣ್ಣ ನೀರಾವರಿ ಇಲಾಖೆಯ ನಿರಾಕ್ಷೇಪಣಾ ಪತ್ರ ಇಲ್ಲದೇ ಕಟ್ಟಡಕ್ಕೆ ಲೈಸನ್ಸ್ ನೀಡಲಾಗಿದೆ ಇದರಲ್ಲಿ ಪುರಸಭೆ ಮುಖ್ಯಾಧಿಕಾರಿಗಳೇ ಕರ್ತವ್ಯಲೋಪ ಎಸಗಿದ್ದಾರೆ ಎಂದು ಪುರಸಭಾ ಸದಸ್ಯ ಶುಭದ್ ರಾವ್ ಆರೋಪಿಸಿದರು.

ಪುರಸಭಾಧ್ಯಕ್ಷ ಯೋಗೀಶ್ ದೇವಾಡಿಗ ಅಧ್ಯಕ್ಷತೆಯಲ್ಲಿ ಸೆ.18ರಂದು ಬುಧವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿದ ಶುಭದ ರಾವ್, ಮುಖ್ಯಾಧಿಕಾರಿಯವರನ್ನುದ್ದೇಶಿಸಿ ಕಟ್ಟಡಕ್ಕೆ ಡೋರ್ ನಂಬರ್ ನೀಡಬಾರದು ಎಂದು ಆಕ್ಷೇಪಣೆ ಹಿನ್ನಲೆಯಲ್ಲಿ ನೀವು ಸಣ್ಣ ನೀರಾವರಿ ಇಲಾಖೆಗೆ ಮಾಹಿತಿ ಕೋರಿ ಪತ್ರ ಬರೆದಿದ್ದೀರಿ, ಆದರೆ ಪತ್ರಕ್ಕೆ ಹಿಂಬರಹ ಬರುವ ಮುನ್ನವೇ ಡೋರ್ ನಂಬರ್ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಬಫರ್ ಝೋನ್ ಆಗಿದ್ದರೂ ಈ ಜಮೀನು ಭೂ ಪರಿವರ್ತನೆಯಾಗಿದೆ ಮಾತ್ರವಲ್ಲದೇ ಸಿಂಗಲ್ ಲೇ ಔಟ್ ನಕ್ಷೆ ಮಾಡಲಾಗಿದ್ದು, ಇದರ ಆಧಾರದಲ್ಲಿ ಕಟ್ಟಡ ನಿರ್ಮಾಣಕ್ಕೆ ಲೈಸನ್ಸ್ ನೀಡಲಾಗಿದೆ, ಆದ್ದರಿಂದ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿದ ಬಳಿಕ ನಿಯಮಾನುಸಾರ ಡೋರ್ ನಂಬರ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಪುರಸಭಾ ಮುಖ್ಯಾಧಿಕಾರಿಗಳು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಶುಭದ್ ರಾವ್, ಮುಖ್ಯಾಧಿಕಾರಿಗಳು ತಮ್ಮ ವೈಯುಕ್ತಿಕ ಕೆಲಸಗಳಿಗೆ ಜವಾನರನ್ನು ಬಳಸಿಕೊಳ್ಳುತ್ತಿದ್ದಾರೆ. ಜವಾನ ದಲಿತ ಎನ್ನುವ ಕಾರಣಕ್ಕಾಗಿ ಆತನಿಂದ ಶೌಚಾಲಯ ಸ್ವಚ್ಚಗೊಳಿಸುತ್ತಿದ್ದಾರೆ, ಇದಲ್ಲದೇ ಮುಖ್ಯಾಧಿಕಾರಿಯವರ ಬ್ಯಾಗ್ ಹಿಡಿಯುವುದು ಜವಾನರ ಕೆಲಸವಲ್ಲ ಎಂದರು ಆಕ್ಷೇಪಿಸಿದರು.ನನ್ನ ವಿರುದ್ಧ ವೈಯುಕ್ತಿಕ ಉದ್ದೇಶದಿಂದ ಇಂತಹ ಆರೋಪ ಮಾಡಲಾಗುತ್ತಿದೆ, ಪುರಸಭೆಯ ಸ್ವಚ್ಚತಾ ಕಾರ್ಯ, ಶೌಚಾಲಯ ಸ್ವಚ್ಚತೆ ಕೆಲಸವನ್ನು ಈ ಹಿಂದಿನಿAದಲೂ ಪೌರ ಕಾರ್ಮಿಕರು ಮಾಡಿಕೊಂಡು ಬರುತ್ತಿದ್ದಾರೆ, ಯಾವುದೇ ಅಧಿಕಾರಿಗಳು ಕಡತಗಳು ಅಥವಾ ಕಚೇರಿಯ ಡೈರಿಯನ್ನು ಜವಾನರ ಕೈಗೆ ಕೊಡುವುದು ತಪ್ಪೇನಿದೆ ಎಂದು ಮುಖ್ಯಾಧಿಕಾರಿ ರೂಪಾ ಶೆಟ್ಟಿ ಸಮಜಾಯಿಷಿ ನೀಡಿದರು.

ಮನೆ ತೆರಿಗೆ, ಆಸ್ತಿ ತೆರಿಗೆ ದುಪ್ಪಟ್ಟು ಪ್ರಮಾಣದಲ್ಲಿ ಏರಿಕೆ ಮಾಡಿದ್ದಾರೆ.ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ ತೆರಿಗೆ ಕಡಿಮೆ ಮಾಡಬೇಕು ಎಂದು ಅಶ್ಪಕ್ ಅಹಮ್ಮದ್ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಮಾಹಿತಿ ನೀಡಿ,ಸರ್ಕಾರ ನಿಗದಿಪಡಿಸಿದ ದರದ ಪ್ರಕಾರ ತೆರಿಗೆ ವಿಧಿಸಲಾಗುತ್ತಿದೆ ಇದನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದಾಗ, ಇದಕ್ಕೆ ಆಕ್ಷೇಪಿಸಿದ ಅಶ್ಪಕ್ ಅಹಮ್ಮದ್ ,ಉಡುಪಿ ನಗರ ಸಭೆಯಲ್ಲಿ ಸರ್ಕಾರದ ಆದೇಶವಿದ್ದರೂ ತೆರಿಗೆ ಹೆಚ್ಚಳ ಮಾಡಿಲ್ಲ, ಆದ್ದರಿಂದ ಕಾರ್ಕಳ ಪುರಸಭೆ ಕೂಡ ತೆರಿಗೆ ಹೆಚ್ಚಳ ಮಾಡಬಾರದು ಎಂದು ಬಿಗಿಪಟ್ಟು ಹಿಡಿದರು.
ಪುರಸಭಾ ವ್ಯಾಪ್ತಿಯ ರಸ್ತೆ ಗುಂಡಿಗಳು ವಾಹನ ಸವಾರರಿಗೆ ಕಂಟಕವಾಗುತ್ತಿದ್ದು ಗುಂಡಿಗಳನ್ನು ಮುಚ್ಚುವ ನಿಟ್ಟಿನಲ್ಲಿ ಪುರಸಭೆ ತಕ್ಷಣವೇ ಕಾರ್ಯಪ್ರವೃತ್ತವಾಗಬೇಕೆಂದು ಪುರಸಭಾ ಸದಸ್ಯರಾದ ಪ್ರಭಾ, ಪ್ರತಿಮಾ, ಪ್ರದೀಪ್, ಸುಮಾ ಕೇಶವ್, ಭಾರತಿ ಅಮೀನ್ ಮುಂತಾದವರು ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷ ಯೋಗೀಶ್ ದೇವಾಡಿಗ ಪ್ರತಿಕ್ರಿಯಿಸಿ ಮಳೆ ಬರುತ್ತಿರುವ ಕಾರಣದಿಂದ ಗುಂಡಿ ಮುಚ್ಚುವ ಕೆಲಸಕ್ಕೆ ತೊಡಕಾಗಿದೆ, ಶೀಘ್ರವೇ ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗುವುದು ಎಂದರು. ಪುರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಪ್ರಸ್ತಾವನೆ, ಅಂದಾಜು ಪಟ್ಟಿ, ಕಾಮಗಾರಿ ನಡೆಯುವ ಸಂದರ್ಭದಲ್ಲಿ ವಾರ್ಡಿನ ಸದಸ್ಯರ ಗಮನಕ್ಕೆ ತರುತ್ತಾರೆ, ಆದರೆ ಬಿಲ್ ಪಾವತಿ ಸಂದರ್ಭದಲ್ಲಿ ಸದಸ್ಯರ ಗಮನಕ್ಕೆ ತರದೇ ಪಾವತಿ ಮಾಡಲಾಗುತ್ತದೆ ಇದನ್ನು ಕೂಡ ಸದಸ್ಯರ ಗಮನಕ್ಕೆ ತರಬೇಕೆಂದು ಪ್ರತಿಮಾ ರಾಣೆ ಆಗ್ರಹಿಸಿದರು.

ಹೊರಗುತ್ತಿಗೆ ಆಧಾರದಲ್ಲಿ ಪುರಸಭೆಗೆ 2 ಸ್ಯಾನಿಟರಿ ಆಫೀಸರ್  ನೇಮಕ ಮಾಡಿದ್ದರೂ ಅವರು ಸ್ಯಾನಿಟರಿ ಇನ್ಸ್ಪೆಕ್ಟರ್ ಗಳಾಗಿ ಕೆಲಸ ಮಾಡದೆ ಕಚೇರಿ ಒಳಗಡೆ ಬೇರೆ ಕೆಲಸ ಮಾಡುತ್ತಿದ್ದಾರೆ ಅದರಿಂದಾಗಿ ಪುರಸಭಾ ವ್ಯಪ್ತಿಯಲ್ಲಿ ಸ್ವಚ್ಚತೆ ಕೆಲಸಗಳಿಗೆ ತೊಂದರೆಯಾಗುತ್ತಿದೆ ನನ್ನ ಮಾತಿಗೆ ಬೆಲೆ ಕೊಡುತ್ತಿಲ್ಲ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರು ಇಬ್ಬರನ್ನು ಕಚೇರಿಯಲ್ಲೇ ಇರುವಂತೆ ವ್ಯವಸ್ಥೆ ಮಾಡಿದ್ದಾರೆ ಇದರಿಂದಾಗಿ ಕೆಲಸನೂ ನಡೀತಿಲ್ಲ ಜನ ನನಗೆ ಬಂದು ಪ್ರಶ್ನಿಸುತ್ತಿದ್ದಾರೆ ಎಂದು  ಆರೋಪಿಸಿ ಪರಿಸರ ಅಭಿಯಂತರೆ ಜ್ಯೋತೀಶ್ವರಿ  ಸಭೆಯಲ್ಲಿ ಕಣ್ಣೀರು ಹಾಕಿದರು
ಈ ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದ ಸದಸ್ಯರು ಪರಸ್ಪರ ಪರ ವಿರೋಧ ಚರ್ಚೆಯಲ್ಲಿ ತೊಡಗಿದರು ಈ ಸಂದರ್ಭ ಸದಸ್ಯರ ಮಧ್ಯೆಯೇ ಗೊಂದಲದ ವಾತಾವರಣ ನಿರ್ಮಾಣವಾಯಿತು
ಪುರಸಭಾ ಸದಸ್ಯ ಸೋಮನಾಥ ನಾಯ್ಕ ನನ್ನ ಸಮುದಾಯದ ಪರಿಸರ ಅಭಿಯಂತರಿಗೆ ಬೇಕಂತಲೇ ಸಮಸ್ಯೆ ಮಾಡುತ್ತಿದ್ದಾರೆ ನಾನು ಹಾಗಾಗಲು ಬಿಡುವುದಿಲ್ಲ ಎಂದರು ಆಗ ಮದ್ಯ ಪ್ರವೇಶಿಸಿದ ಅಧ್ಯಕ್ಷ ಯೋಗೀಶ್ ದೇವಾಡಿಗ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ನಾನು ಸಮಸ್ಯೆ ತಲೆದೋರಿದಾಗ ಅಧಿಕಾರಿಗಳನ್ನು ನನ್ನ ಚೆಂಬರ್ ಕರೆಸಿ ಮಾತನಾಡಿದ್ದೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವಂತೆ ಸಲಹೆ ನೀಡಿದ್ದೇನೆ ಹೊರತು ಯಾವುದೇ ಪಕ್ಷಪಾತ ಮಾಡಲಿಲ್ಲ ಎಂದರು

ಕುಡಿಯುವ ನೀರಿನ ಸರಬರಾಜು ಮಾಡುತ್ತಿರುವ ರಾಮಸಮುದ್ರ ಕೆರೆಗೆ ಪಕ್ಕದಲ್ಲೇ ಇರುವ ಎ ಏನ್ ಎಫ್ ಕ್ಯಾಂಪ್, ಗೋಡಂಬಿ ಕಾರ್ಖಾನೆಗಳು, ಮನೆಗಳ ಕೊಳಚೆ ನೀರು ಹಾಗೂ ಶೌಚಾಲಯದ ನೀರು , ರಾಸಾಯನಿಕಗಳ ನೀರು ಹರಿಯ ಬಿಡುವುದರಿಂದ ರಾಮಸಮುದ್ರ ನೀರು ಸಂಪೂರ್ಣ ಕಲುಷಿತಗೊಂಡು ದುರ್ವಾಸನೆಯಿಂದ ಕೂಡಿದ್ದು ಈ ಕೂಡಲೇ ಪುರಸಭೆಯಿಂದ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಪುರಸಭಾ ಸದಸ್ಯ ವಿನ್ನಿ ಬೋಲ್ಡ್ ಮೆನ್ಡೋನ್ಸ ಎಚ್ಚರಿಕೆ ನೀಡಿದರು

ವೇದಿಕೆಯಲ್ಲಿ ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್  ಉಪಸ್ತಿತರಿದ್ದರು
ಸದಸ್ಯರಾದ ಪ್ರವೀಣ್ ಚಂದ್ರ ಶೆಟ್ಟಿ , ರೆಹಮತ್ ಏನ್ ಶೇಖ್, ಹರೀಶ್ ದೇವಾಡಿಗ, ಸುಮಾ ಕೇಶವ್, ಶಶಿಕಲಾ ಶೆಟ್ಟಿ, ನೀತಾ ಆಚಾರ್ಯ, ಭಾರತಿ ಅಮೀನ್ , ಶೋಭಾ ದೇವಾಡಿಗ, ಪಲ್ಲವಿ ಪ್ರವೀಣ್, ಮಮತಾ, ಸೀತಾರಾಮ್ ಉಪಸ್ಥಿತರಿದ್ದರು

 

                       in 

                          

                        

                       

Leave a Reply

Your email address will not be published. Required fields are marked *