ಹೆಬ್ರಿ: ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ಭಾರೀ ಘನವಾಹನಗಳ(ಸರಕು ಸಾಗಾಟದ) ಸಂಚಾರವನ್ನು ನಿಗದಿತ ಅವಧಿಗೆ ನಿಷೇಧಿಸಲಾಗಿದೆ.
ಘಾಟಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭಾರಿ ವಾಹನಗಳ ಓಡಾಟದಿಂದ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಮಣ್ಣು ಸಡಿಲಗೊಂಡು ಭೂಕುಸಿತದ ಸಂಭವದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಜೂನ್ 15 ರಿಂದ ಸೆಪ್ಟೆಂಬರ್ 30 ರ ವರೆಗೆ ಭಾರೀ ಸರಕು ಸಾಗಾಟದ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು, ಬಸ್ಸು, ಕಾರು, ಸಣ್ಣಪುಟ್ಟ ವಾಹನಗಳು, ಬೈಕ್ ಮುಂತಾದ ಲಘು ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಿ ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿದ್ದಾರೆ.
ಉಡುಪಿಯಿಂದ ತೀರ್ಥಹಳ್ಳಿಗೆ ಸಂಚರಿಸುವ ಭಾರಿ ವಾಹನಗಳು ಬದಲಿ ಮಾರ್ಗವಾಗಿ ಉಡುಪಿ-ಕುಂದಾಪುರ-ಸಿದ್ದಾಪುರ-ಮಾಸ್ತಿಕಟ್ಟೆ-ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸುವಂತೆ ಹಾಗೂ ಕಾರ್ಕಳದಿಂದ ಸಾಗುವ ವಾಹನಗಳು ಮಾಳ ಎಸ್.ಕೆ ಬಾರ್ಡರ್, ಕುದುರೆಮುಖ ಘಾಟಿ, ಕೊಪ್ಪ ಮೂಲಕ ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ಸೂಚಿಸಲಾಗಿದೆ.