Share this news

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಮಾರಾಟ/ಸಾಗಾಟ ಚಟುವಟಿಕೆಗಳನ್ನು ತಡೆಗಟ್ಟುವ ಸಂಬಂಧ ಅಬಕಾರಿ ಇಲಾಖೆ ಕಾರ್ಯಾಚರಣೆ ನಡೆಸಿ ಅಕ್ಟೋಬರ್‌ ತಿಂಗಳಿನಲ್ಲಿ ಒಟ್ಟು 5.051 ಗ್ರಾಂ ಗಾಂಜಾ ಹಾಗೂ ಒಟ್ಟು 9.460 ಗ್ರಾಂ ಎಂಡಿಎಂ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅ.18ರಂದು ಬೈಕಂಪಾಡಿಯ ಕೆ.ಎಸ್‌.ಬಿ.ಸಿ.ಎಲ್‌ ಡಿಪೋ-2ಕ್ಕೆ ಹಾಸನದಿಂದ ಒಟ್ಟು 1,100 ಪೆಟ್ಟಿಗೆ (10,680 ಲೀ.) ಬಿಯರ್‌ ಅವಧಿ ಮೀರಿದ ರಹದಾರಿ ಪತ್ರದೊಂದಿಗೆ ಲಾರಿಯ ಮೂಲಕ ಸರಬರಾಜಾಗಿದ್ದು, ಅವಧಿ ಮೀರಿದ ರಹದಾರಿ ಪತ್ರದೊಂದಿಗೆ ಬಿಯರ್‌ ಸರಬರಾಜು ಮಾಡಿ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಪತ್ತೆಹಚ್ಚಿ ವಾಹನ ಮತ್ತು ಬಿಯರ್‌ ಅನ್ನು ಜಫ್ತಿಪಡಿಸಿ ಕೇಸು ದಾಖಲಿಸಲಾಗಿದೆ.

ಅ.14ರಂದು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕದ ಅಂಗಡಿಯೊಂದರಲ್ಲಿ ಹೋಮ್‌ ಮೇಡ್‌ ವೈನ್‌ ಅನ್ನು ಅಕ್ರಮವಾಗಿ ದಾಸ್ತಾನು ಹೊಂದಿ ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಒಟ್ಟು 111.750 ಲೀ. ವೈನ್‌ ಜಪ್ತಿ ಮಾಡಿ ಅಬಕಾರಿ ಇಲಾಖೆಯ ಅಧಿಕಾರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅ. 20ರಂದು ಬೈಕಂಪಾಡಿಯಿಂದ ಬಜಪೆಗೆ ಹೋಗುವ ರಸ್ತೆಯ ಕರ್ಕೇರ ಮೂಲ ಸ್ಥಾನದ ಬಳಿ ಯಾವುದೇ ರಹದಾರಿಯಿಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವುದನ್ನು ಪತ್ತೆಹಚ್ಚಿ ಒಟ್ಟು 3.690 ಲೀ. ಮದ್ಯ ಹಾಗೂ ವಾಹನವನ್ನು ಜಪ್ತಿ ಮಾಡಿದ್ದಾರೆ ಎಂದು ಅಬಕಾರಿ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ್‌ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *