ಮಂಗಳೂರು: ಎಸ್ ಡಿ ಎಂ ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇದರ ಚಿಣ್ಣರ ಅಕ್ಷರ ಅಭ್ಯಾಸ ಸಾಂಪ್ರದಾಯಿಕವಾಗಿ ದೇವತಾ ಪ್ರಾರ್ಥನೆ,ಭಜನೆ ಹಾಗೂ ವಿಧಿ ವಿಧಾನಗಳೊಂದಿಗೆ ಆರಂಭಿಸಲಾಯಿತು.
ಎಲ್ಲಾ ಸಂಪತ್ತುಗಳಿಗಿಂತ ವಿದ್ಯೆ ಬೆಲೆಬಾಳುವ ಸಂಪತ್ತು. ಅದನ್ನು ಯಾರೂ ಕದಿಯಲಾಗದು.ಉನ್ನತ ಬದುಕಿಗೆ ಉತ್ತಮ ವಿದ್ಯೆಯ ಅವಶ್ಯಕತೆ ಇದೆ. ಈ ವಿದ್ಯೆ ಮಾನವನನ್ನು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸಬಲ್ಲದು ಎಂದು ಆಡಳಿತಾಧಿಕಾರಿ ನರೇಶ ಮಲ್ಲಿಗೆಮಾಡು ತಿಳಿಸಿ ಶುಭ ಹಾರೈಸಿದರು.
ಎದೆಗೆ ಬಿದ್ದ ಅಕ್ಷರ,ಭೂಮಿಗೆ ಬಿತ್ತಿದ ಬೀಜ ಯಾವತ್ತೂ ಫಲ ನೀಡುತ್ತದೆ. ಜ್ಞಾನವಂತರಾಗಿ, ಶ್ರೇಷ್ಠ ನಾಗರಿಕರಾಗಿ ಬೆಳೆಯಲು ಇವತ್ತು ಆರಂಭಿಸಿದ ಅಕ್ಷರ ಅಭ್ಯಾಸ ಮಕ್ಕಳ ಬಾಳಿಗೆ ಬೆಳಕಾಗಿ ಪರಿಣಮಿಸಲಿ ಎಂದು ಹಾರೈಸಿದರು. ಸಮಾರಂಭದಲ್ಲಿ ಮುಖ್ಯ ಶಿಕ್ಷಕ ವಿಠಲ ವಾಗ್ಮೊರೆ ತರಗತಿ ಶಿಕ್ಷಕರಾದ ರಮಾ,ಶ್ವೇತ ಹಾಗೂ ಹೆತ್ತವರು ಇದ್ದರು. ಯೋಗ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲ ಅಕ್ಷರಾಭ್ಯಾಸದ ವಿಧಿ ವಿಧಾನಗಳನ್ನು ನೆರವೇರಿಸಿದರು. ಶಿಕ್ಷಕಿ ಹರಿಣಾಕ್ಷಿ ವಂದಿಸಿದರು.