ಮಂಗಳೂರು: ಭಾರತದ ಅತಿದೊಡ್ಡ ಭೂಗತ ಎಲ್ಪಿಜಿ ಸಂಗ್ರಹಣಾಗಾರ ಮಂಗಳೂರಿನಲ್ಲಿ ಪೂರ್ಣಗೊಂಡಿದೆ. ಇದರೊಂದಿಗೆ, ದೇಶದ ಇಂಧನ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ.ಈ ಭೂಗತ ಸುರಂಗದಲ್ಲಿ 80 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಅನಿಲವನ್ನು ಸಂಗ್ರಹಿಸುವುದು ಸಾಧ್ಯವಾಗಲಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ಗಾಗಿ ಎಂಇಐಎಲ್ ನಿರ್ಮಿಸಿರುವ ಈ ಸಂಗ್ರಹಾಗಾರವು ಇಂಧನ ಸುರಕ್ಷತೆ ಮತ್ತು ನಿರಂತರ ಪೂರೈಕೆಯನ್ನು ಖಾತರಿಪಡಿಸಲಿದೆ.
ಭೂಗತ ಸಂಗ್ರಹ ವ್ಯವಸ್ಥೆಯ ಸುರಕ್ಷತೆ ಪರಿಶೀಲನೆಗಾಗಿ ಕಳೆದ ಮೇ 9ರಿಂದ ಜೂನ್ 6 ರವರೆಗೆ ನಡೆದ ಕ್ಯಾವರ್ನ್ ಆಕ್ಸೆಪ್ಟೆನ್ಸ್ ಟೆಸ್ಟ್-ಕ್ಯಾಟ್ ಕುರಿತು ಕಾಮಗಾರಿ ವಹಿಸಿರುವ ಮೇಘಾ ಎಂಜಿನಿಯರಿಂಗ್ನ ತಜ್ಞರು ತಿಳಿಸಿದ್ದು, ಯಾವುದೇ ತುರ್ತು ಸನ್ನಿವೇಶಗಳಲ್ಲಿ ದೇಶಕ್ಕೆ ಬೇಕಾದ ಅನಿಲ ಬೇಡಿಕೆಯನ್ನು ಈಡೇರಿಸಲು ಈ ಹೊಸ ಸೌಲಭ್ಯ ನೆರವಾಗಲಿದೆ. ಹಾಗಾಗಿ ಕೇಂದ್ರ ಸರ್ಕಾರ ಮಂಗಳೂರಿನಲ್ಲಿ ಇದನ್ನು ಸ್ಥಾಪಿಸಿದೆ.
ಈ ಸಂಗ್ರಹಾಗಾರವು ಆರು ಲಕ್ಷ ಬ್ಯಾರೆಲ್ಗಳು ಅಥವಾ 60 ಮಿಲಿಯನ್ ಲೀಟರ್ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಸಂಗ್ರಹಿಸಬಹುದು. ಅಷ್ಟೇ ಅಲ್ಲದೆ, 40,000 ಟನ್ ಪ್ರೊಪೇನ್ ಮತ್ತು 60,000 ಟನ್ ಬ್ಯುಟೇನ್ ಅನ್ನು ಸಂಗ್ರಹಿಸುವುದಕ್ಕಾಗಿ ವಿನ್ಯಾಸಗೊಳಿಸಲಾದ ಎರಡು ಪ್ರತ್ಯೇಕ ಭೂಗತ ಕೊಠಡಿಗಳನ್ನು ಒಳಗೊಂಡಿದೆ. ಅತ್ಯದ್ಭುತವಾಗಿ ವಿನ್ಯಾಸಗೊಳಿಸಲಾದ ಈ ಭೂಗತ ಸಂಗ್ರಹಾಗಾರವು 1,083 ಮೀಟರ್ ಸುರಂಗವನ್ನು ಹೊಂದಿದೆ. ಸಂಗ್ರಹಾಗಾರದ ಎರಡು ಮುಖ್ಯ ಘಟಕಗಳು ಎಸ್1 ಮತ್ತು ಎಸ್2 ಕ್ರಮವಾಗಿ 220 ಮೀಟರ್ ಮತ್ತು 225 ಮೀಟರ್ ಆಳದಲ್ಲಿವೆ.
ಈಗಾಗಲೇ ಮಂಗಳೂರಿನ ಪೆರ್ಮುದೆ (1.5 ಲಕ್ಷ ಮೆಟ್ರಿಕ್ ಟನ್) ಹಾಗೂ ಪಾದೂರಿನಲ್ಲಿ (2.5 ಲಕ್ಷ ಮೆಟ್ರಿಕ್ ಟನ್) ಭೂಗತ ತೈಲ ಸಂಗ್ರಹಣಾಗಾರಗಳಿವೆ. ಇದು 3ನೇ ಭೂಗತ ಸುರಂಗವಾಗಿದ್ದು, ಇದರಲ್ಲಿ ಎಲ್ಪಿಜಿ ಸಂಗ್ರಹಿಸಲಾಗುವುದು. ಸದ್ಯ ವಿಶಾಖಪಟ್ಟಣಂನಲ್ಲಿ ನಿರ್ಮಿಸಿರುವ ಎಲ್ಪಿಜಿ ಸಂಗ್ರಹಣಾಗಾರಕ್ಕೆ 60 ಸಾವಿರ ಟನ್ ಸಾಮರ್ಥ್ಯವಿದ್ದು. ಮಂಗಳೂರಿನದ್ದು 80 ಸಾವಿರ ಮೆಗಾಟನ್ ಸಾಮರ್ಥ್ಯದ ಮೂಲಕ ದೇಶದಲ್ಲೇ ಅತಿ ದೊಡ್ಡದಾಗಿದೆ.
ಇಂಧನ ಪೂರೈಕೆಯಲ್ಲಿನ ಅಡೆತಡೆಗಳ ನಿವಾರಣೆ ಮತ್ತು ಇಂಧನ ಪೂರೈಕೆ ವಿಚಾರದಲ್ಲಿ ರಾಷ್ಟ್ರೀಯ ಸನ್ನದ್ಧತೆಯನ್ನು ಹೆಚ್ಚಿಸುವಲ್ಲಿ ಈ ಸಂಗ್ರಹಾಗಾರವು ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಮೂಲಗಳು ತಿಳಿಸಿವೆ.