ಕಾರ್ಕಳ: ತೆಂಕುತಿಟ್ಟಿನ ಹಾಸ್ಯ ದಿಗ್ಗಜ ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಶ್ರೀ ಜಯರಾಮ ಆಚಾರ್ಯ ಅವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದು ಅವರ ನಿಧನಕ್ಕೆ ಶಾಸಕ, ಮಾಜಿ ಸಚಿವರಾದ ವಿ.ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.
ಐವತ್ತು ವರ್ಷಗಳ ಸುದೀರ್ಘ ಯಕ್ಷಗಾನದ ತಿರುಗಾಟ ನಡೆಸಿ ತನ್ನ ಬದುಕಿನ ಉದ್ದಕ್ಕೂ ಕಲಾಭಿಮಾನಿಗಳನ್ನು ರಂಜಿಸುತ್ತ ತಮ್ಮ ಶುದ್ಧ, ನವಿರಾದ ಹಾಸ್ಯದೊಂದಿಗೆ, ಮುಖಭಾವದಿಂದಲೇ ಹಾಸ್ಯವನ್ನು ಚಿಮ್ಮಿಸಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಶ್ರೀಯುತರು ಇಂದು ತನ್ನ ಬದುಕಿಗೆ ಮಂಗಳ ಹಾಡಿ ಇಹಲೋಕ ತ್ಯಜಿಸಿದ್ದಾರೆ.
ಅನೇಕ ಪ್ರತಿಷ್ಠಿತ ಯಕ್ಷಗಾನ ಮೇಳಗಳಲ್ಲಿ ಸುದೀರ್ಘವಾಗಿ ಸೇವೆಯನ್ನು ಮಾಡಿದ ಹಿರಿಮೆ ಇವರದ್ದು. ಅಗಲಿದ ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ, ಅಪಾರ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.





























