ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಂವಿಧಾನಿಕ ಪದಬಳಕೆ ಆರೋಪ ಪ್ರಕರಣದಲ್ಲಿ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಜಾಮೀನು ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಕೋರ್ಟ್ ಆದೇಶ ಪ್ರಕಟಿಸಿದೆ. ಸಿ.ಟಿ ರವಿ ಅವರನ್ನ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಬೆಳಗಾವಿ 5ನೇ ಜೆಎಂಎಫ್ಸಿ ಕೋರ್ಟ್ನ ನ್ಯಾಯಾಧೀರಾದ ಸ್ಪರ್ಶಾ ಡಿಸೋಜಾ ಅವರು ಆದೇಶಿಸಿದ್ದಾರೆ.
ಘನತೆ, ಗೌರವದಿಂದ ಆರೋಪಿಯನ್ನು ಕರೆದುಕೊಂಡು ಹೋಗಬೇಕು. 24 ಗಂಟೆಯೊಳಗೆ ಬೆಂಗಳೂರಿನ ಕೋರ್ಟ್ ಹಾಜರು ಪಡಿಸಲು ಸೂಚನೆ ನೀಡಿದೆ. ಅಂತೆಯೇ ಪೊಲೀಸರು ಬೆಳಗಾವಿಯಿಂದ ಬೆಂಗಳೂರಿನತ್ತ ಸಿಟಿ ರವಿಯನ್ನು ಕರೆದುಕೊಂಡು ಬರುತ್ತಿದ್ದಾರೆ.
ಹಿರೇಬಾಗೇವಾಡಿ ಪೊಲೀಸರು ಇಂದು ಬೆಳಗ್ಗೆ ಬೆಳಗಾವಿ ಕೋರ್ಟ್ಗೆ ಸಿ.ಟಿ ರವಿ ಅವರನ್ನು ಹಾಜರುಪಡಿಸಿದ್ದರು. ಈ ವೇಳೆ ವಕೀಲರು ಜಾಮೀನು ನೀಡುವಂತೆ ಮನವಿ ಮಾಡಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್ ಆದೇಶ ಕಾಯ್ದಿರಿಸಿತ್ತು. ತನಿಖಾಧಿಕಾರಿಗಳು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕರೆದೊಯ್ಯಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ಬೆಳಗಾವಿ ಕೋರ್ಟ್, ಅನುಮತಿ ನೀಡಿದ್ದು, ಎಷ್ಟು ಸಮಯಬೇಕು ಎಂದು ಕೇಳಿದೆ. ಇದಕ್ಕೆ ಪೊಲೀಸರು, ವಿಮಾನದಲ್ಲಿ ಮೂಲಕ ಹೋಗುವುದಾರೆ 2 ಗಂಟೆ, ರಸ್ತೆ ಮೂಲಕ ಹೋಗುವುದಾರೆ 12 ಗಂಟೆ ಬೇಕು ಎಂದು ಕೋರ್ಟ್ ಗೆ ಸ್ಪಷ್ಟಪಡಿಸಿದ್ದಾರೆ.
ಯಾವುದೇ ನೋಟಿಸ್ ನೀಡದೇ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದಾರೆ. ರಾತ್ರಿಯಿಡೀ ನನ್ನನ್ನು ಬಂಧನದಲ್ಲಿಟ್ಟು ಸರ್ವಾಧಿಕಾರ ಮೆರೆದಿದ್ದಾರೆ. ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ದರ್ಬಳಕೆ ಮಾಡಿಕೊಂಡಿದೆ. ಸರ್ವಾಧಿಕಾರ ಬಹಳ ದಿನ ನಡೆಯಲ್ಲ, ಎಲ್ಲದಕ್ಕೂ ಕೊನೆಯಿರುತ್ತೆ. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ, ನಮಗೂ ಕಾಲ ಬರುತ್ತೆ ಎಂದು ಸಿಟಿ ರವಿ ಅವರು ಪ್ರತಿಕ್ರಿಯಿಸಿದ್ದಾರೆ.
