ಉಡುಪಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ಸಿನ ಕುತಂತ್ರವನ್ನು ಬಯಲಿಗೆಳೆದಿದ್ದಾರೆಯೇ ಹೊರತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರನ್ನು ಅವಮಾನಿಸಿಲ್ಲ ಎಂದು ತನ್ನ ಸಂಪುಟದ ಸಚಿವರ ಪರವಾಗಿ ಪ್ರಧಾನಿ ಮೋದಿ ನೀಡಿರುವ ಹೇಳಿಕೆ ಪ್ರಧಾನಿ ಹುದ್ದೆಗೆ ಗೌರವ ತರುವುದಿಲ್ಲ, ಬಾಬಾ ಸಾಹೆಬ್ ಅಂಬೇಡ್ಕರ್ ಬಗ್ಗೆ ಅಮಿತ್ ಶಾ ನೀಡಿದ ಹೇಳಿಕೆ ಖಂಡನೀಯ. ಇದು ಬಿಜೆಪಿ ನಾಯಕರ ಸಂವಿಧಾನ ವಿರೋಧಿ ನೀತಿಯನ್ನು ಎತ್ತಿತೋರಿಸಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ಹೇಳಿದ್ದಾರೆ.
ಇತಿಹಾಸವನ್ನು ಅರಿಯದವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ಊರ ಹೊರಗಿದ್ದವರನ್ನು ಊರೊಳಗೆ ಕರೆದು ಊರನ್ನು ಆಳುವ ಅವಕಾಶ ಮಾಡಿ ಕೊಟ್ಟದ್ದೇ ಅಂಬೇಡ್ಕರ್ ನೇತೃತ್ವ ದಲ್ಲಿ ರಚನೆಗೊಂಡ ಸಂವಿಧಾನ. ಅಂತಹ ಸಂವಿಧಾನವನ್ನೇ ಬದಲಿಸಲು ಹೊರಟವರಿಗೆ ಅಂಬೇಡ್ಕರ್ ಅಪಥ್ಯ ಆಗುವುದರಲ್ಲಿ ಆಶ್ಚರ್ಯ ಇಲ್ಲ. ದೇಶದಲ್ಲಿ ಶತಶತಮಾನಗಳಿಂದ ಸಾಮಾಜಿಕ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಮನುವಾದಿ ಸಂಸ್ಕೃತಿ ವರ್ಣಭೇದ ಲಿಂಗ ತಾರತಮ್ಯದ ವಿರುದ್ಧ ಹೋರಾಡುತ್ತಲೇ ಬಂದ ಪುಳೆ ಪೆರಿಯಾರ್ ನಾರಾಯಣಗುರು ಬಸವಾದಿ ಶರಣರ ಸಂತರ ಹೆಸರನ್ನು ಇತಿಹಾಸದ ಪುಟಗಳಿಂದ ಅಳಿಸಿ ಹಾಕಲು ಷಡ್ಯಂತ್ರ ನಡೆಸಿದವರು ಯಾರು ಎನ್ನುವುದನ್ನು ಅದೇ ಇತಿಹಾಸ ದಾಖಲಿಸಿಕೊಂಡಿದೆ. ದೆಹಲಿ ರಾಜಪಥ ಪರೇಡಿನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆ ಇದಕ್ಕೊಂದು ಇತ್ತೀಚಿನ ಉದಾಹರಣೆ ಎಂದು ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್ ರಚಿಸಿದ ಸಂವಿಧಾನದ ಮಾರ್ಗಸೂಚಿ ಮೌಲ್ಯದಡಿಯಲ್ಲಿ ಕಳೆದ ಸುಮಾರು 6 ದಶಕಗಳ ಕಾಲ ಪ್ರಧಾನಿ ನೆಹರೂ ಇಂದಿರಾ ಆದಿಯಾಗಿ ಪ್ರಧಾನಿ ಮನಮೋಹನ ಸಿಂಗ್ ವರೆಗಿನ ಆಡಳಿತಾವದಿಯಲ್ಲಿ ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 3 ನೇ ಸ್ಥಾನದಲ್ಲಿತ್ತು. ಆದರೆ ಕಳೆದ 10ವರ್ಷಗಳ ಪ್ರಧಾನಿ ಮೋದಿ ನೇತೃತ್ವದ ಸಂವಿಧಾನವನ್ನೇ ಬದಲಿಸಲು ಹೊರಟ ಆಡಳಿತ ದೇಶವನ್ನು ಆರ್ಥಿಕವಾಗಿ 164 ನೇ ಸ್ಥಾನಕ್ಕೆ ಇಳಿಸಿತಷ್ಟೇ ಅಲ್ಲ 55ಲಕ್ಷ ಕೋಟಿ ಇದ್ದ ಸಾಲವನ್ನು ಸುಮಾರು 150 ಲಕ್ಷ ಕೋಟಿಗೆ ಏರಿಸಿ ಯುವಜನರಲ್ಲಿ ನಿರುಧ್ಯೋಗ ತಾಂಡವವಾಡುವಂತೆ ಮಾಡಿತು. ಬಹು:ಶ ಇದನ್ನೇ ಅಭಿವೃದ್ಧಿ ಎಂದು ವ್ಯಾಖ್ಯಾನಿಸುವ ಮೋದಿ ಶಾ ಪರಿವಾರಕ್ಕೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ಉಲ್ಲೇಖ ಒಂದು ಹುಚ್ಚು ಮನಸ್ಥಿತಿಯಾಗಿ ಕಂಡು ಬಂದಿರುವುದರಲ್ಲಿ ಅಶ್ಚರ್ಯವಿಲ್ಲ ಎಂದು ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
