ಮೈಸೂರು:ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಭಾರತ್ ಮಾತಾ ಕೀ ಜೈ ಎಂದು ಉದ್ಘೋಷ ಹಾಕಲು ಕೂಡ ಕಾಂಗ್ರೆಸ್ ನಾಯಕರ ಅಪ್ಪಣೆ ಬೇಕೆನ್ನುವ ಮಟ್ಟಕ್ಕೆ ಕಾಂಗ್ರೆಸ್ ತಲುಪಿದೆ ಎಂದಾದರೆ ಆ ಪಕ್ಷಕ್ಕೆ ಮತ ನೀಡಬೇಕಾ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅವರು ಮೈಸೂರಿನಲ್ಲಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷದ ತುಕ್ಡೆ ಗ್ಯಾಂಗ್ ದೇಶವನ್ನು ವಿಭಜಿಸಲು ಹೊರಟಿದೆ. ಕಾಂಗ್ರೆಸ್ ಗೆ ದೇಶದ ಅಭಿವೃದ್ದಿ,ಶಾಂತಿ ನೆಮ್ಮದಿ ಬೇಕಿಲ್ಲ, ರಾಮ ಮಂದಿರ ಉದ್ಘಾಟನೆಯನ್ನು ಬಹಿಷ್ಕರಿಸಿದವರನ್ನು ಕರ್ನಾಟಕದ ಜನತೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಇದೇವೇಳೆ ಮಾತನಾಡಿದ ಅವರು, ಚೈತ್ರ ನವರಾತ್ರಿಯಂದು ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದೆ. ತಾಯಿ ಚಾಮುಂಡೇಶ್ವರಿ, ತಾಯಿ ಭುವನೇಶ್ವರಿ ಹಾಗೂ ತಾಯಿ ಕಾವೇರಿಯ ಪಾದಗಳಿಗೆ ಪ್ರಣಾಮ ಮಾಡುತ್ತೇನೆ ಎಂದು ಹೇಳಿದರು. ದೇವೇಗೌಡರು ಇಂದು ದೇಶದ ಹಿರಿಯ ರಾಜಕಾರಣಿಗಳು. ಅವರ ಆಶೀರ್ವಾದ ಪಡೆಯೋದು ನನ್ನ ಭಾಗ್ಯ. ಇವರು ಅಂದು ಮಾತನಾಡಿದ್ದರಲ್ಲಿ ಕೆಲವೊಂದು ನನಗೆ ಅರ್ಥವಾಯಿತು. ಇವತ್ತು ಸಂಕಲ್ಪ ಪತ್ರ ಬಿಡುಗಡೆ ಮಾಡಿದ್ದೇವೆ. ಇದು ಮೋದಿ ಗ್ಯಾರಂಟಿ. ಬಡವರಿಗೆ ಮೂರು ಕೋಟಿ ಮನೆ ನಿರ್ಮಾಣ. ಫ್ರೀ ರೇಷನ್ಅನ್ನು ಇನ್ನೂ ಐದು ವರ್ಷ ವಿಸ್ತರಣೆ ಮಾಡಿದ್ದೇವೆ. 70 ವರ್ಷಕ್ಕಿಂತ ಹಿರಿಯರಿಗೂ ಆಯುಷ್ಮಾನ್ ಭಾರತ್ ಯೋಜನೆಯನ್ನು ಮುಂದುವರಿಸಲಿದ್ದೇವೆ. ಇದು ಮೋದಿ ಗ್ಯಾರಂಟಿ ಎಂದು ಹೇಳಿದರು.
ಕರ್ನಾಟಕ ದೇಶದ ಐಟಿ & ಟೆಕ್ನಾಲಜಿ ಹಬ್ ಆಗಿದೆ. ಇಲ್ಲಿನ ಯುವಕರಿಗೆ ಇದರ ಹೆಚ್ಚಿನ ಲಾಭ ಸಿಗಬೇಕು. ನಾವು ಸಂಕಲ್ಪ ಪತ್ರದಲ್ಲಿ ಸ್ಥಳೀಯ ಭಾಷೆಗಳ ಪ್ರೋತ್ಸಾಹ ನೀಡುವುದಾಗಿ ಹೇಳಿದ್ದೇವೆ. ಕನ್ನಡ ದೇಶದ ಸಮೃದ್ಧ ಭಾಷೆ. ಬಿಜೆಪಿಯ ಈ ಮಿಷನ್ನಿಂದ ಕನ್ನಡದ ವಿಸ್ತಾರವಾಗುತ್ತದೆ ಹಾಗೂ ಹೆಚ್ಚಿನ ಮಾನ್ಯತೆ ಸಿಗುತ್ತದೆ. ಮೈಸೂರು, ಹಂಪಿ ಬಾದಾಮಿ ರೀತಿಯ ಹೆರಿಟೇಜ್ ಸೈಟ್ಗಳನ್ನು ವಿಶ್ವ ಟೂರಿಸಂ ಭೂಪಟದಲ್ಲಿ ಪ್ರಮೋಟ್ ಮಾಡಲಿದ್ದೇನೆ. ಇದರಿಂದ ಕರ್ನಾಟಕದಲ್ಲಿ ಟೂರಿಂಸಂ ಹಾಗೂ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಇವೆಲ್ಲವೂ ಜಾರಿಯಾಗಲು ಬಿಜೆಪಿ ಅಗತ್ಯವಿದೆ. ಎನ್ಡಿಎ ಅಗತ್ಯದೆ. ಎನ್ಡಿಎ ಏನು ಹೇಳುತ್ತೋ ಅದನ್ನು ಮಾಡುತ್ತದೆ. 370ನೇ ವಿಧಿ, ತ್ರಿವಳಿ ತಲಾಕ್, ರಾಮ ಮಂದಿರವೇ ಆಗಲಿ ಬಿಜೆಪಿಯ ಸಂಕಲ್ಪವೇ ಮೋದಿಯ ಗ್ಯಾರಂಟಿ. ಮೋದಿಯ ಗ್ಯಾರಂಟಿಗೆ ಹೆಚ್ಚಿನ ಬಲ ನಿಮ್ಮ ಒಂದು ವೋಟ್ನಿಂದ ಸಿಗುತ್ತದೆ. ನಿಮ್ಮ ಒಂದು ಮತ, ನನ್ನ ಬಲವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಹೇಳಿದರು.










