Share this news

ಕಾರ್ಕಳ : ಉಡುಪಿಯ ನಂದಿಕೂರು ಯುಪಿಸಿಎಲ್ ವಿದ್ಯುತ್ ಸ್ಥಾವರದಿಂದ ಕೇರಳದ ಕಾಸರಗೋಡಿಗೆ 400 ಕೆವಿ ವಿದ್ಯುತ್ ಲೈನ್ ಯೋಜನೆಯಲ್ಲಿ ಸರಕಾರ ರೈತರಿಗೆ ಅನೂಕೂಲವಾಗುವಂತೆ ಬದಲಾವಣೆ ಮಾಡಿಕೊಳ್ಳಬೇಕು. ಆದ್ದರಿಂದ ತಕ್ಷಣಕ್ಕೆ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಬೇಕು ಎಂದು ಡಿ. 19 ರಂದು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಇಂಧನ ಸಚಿವ ಕೆ. ಜೆ. ಜಾರ್ಜ್ ಅವರ ಗಮನ ಸೆಳೆದರು.

ಈ ಯೋಜನೆಗೆ ಯಾರ ವಿರೋಧವೂ ಇಲ್ಲ. ಆದರೆ, ರೈತರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಯೋಜನೆ ಅನುಷ್ಠಾನದ ಕುರಿತಾಗಿ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ರೈತರು ಆಂತಕದಲ್ಲಿದ್ದಾರೆ. ಕೃಷಿ ಭೂಮಿ ಹಾಗೂ ಸಮೃದ್ಧವಾಗಿ ಬೆಳೆದು ನಿಂತ ಕೃಷಿಗೆ ಹಾನಿಯಾಗದಂತೆ ಸರಕಾರಿ ಭೂಮಿಯಲ್ಲಿ ವಿದ್ಯುತ್ ಲೈನ್ ಮತ್ತು ಟವರ್ ಅಳವಡಿಸಬೇಕು ಎಂಬುದು ರೈತರ ಆಗ್ರಹ. ಆದ್ದರಿಂದ ರೈತರ ಬೇಡಿಕೆಯಂತೆ ಕೃಷಿ ಭೂಮಿಗೆ ಹಾನಿಯಾಗದಂತೆ ಪರ್ಯಾಯ ಮಾರ್ಗವಾಗಿ ವಿದ್ಯತ್ ಲೈನ್ ಅಳವಡಿಕೆಯ ಬಗ್ಗೆ ಅಧಿಕಾರಿಗಳು ರೈತರೊಂದಿಗೆ ಮಾತುಕೆತೆ ನಡೆಸಿ ಯೋಜನೆಯಲ್ಲಿ ಬದಲಾವಣೆ ಮಾಡಿಕೊಂಡು ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ಸರಕಾರ ಕಾರ್ಯಪ್ರವೃತ್ತವಾಗಬೇಕು ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಇಂಧನ ಸಚಿವರು, ಈ ವಿಚಾರವಾಗಿ ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.

 

Leave a Reply

Your email address will not be published. Required fields are marked *