ಹುಬ್ಬಳ್ಳಿ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪುತ್ರ ಕೆ.ಇ.ಕಾಂತೇಶ್?ಗೆ ಹಾವೇರಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಹೀನಾಯವಾಗಿ ಸೋತಿದ್ದ ಬಿಜೆಪಿ ಉಚ್ಚಾಟಿತ ಮುಖಂಡ ಕೆ.ಎಸ್.ಈಶ್ವರಪ್ಪ ಇದೀಗ ಹೊಸ ಪಕ್ಷ ಕಟ್ಟುವ ಕುರಿತು ಸುಳಿವು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಈಶ್ವರಪ್ಪ, ಹಿಂದುಳಿದವರಿಗೆ ನ್ಯಾಯ ಕೊಡಲು ಒಂದು ಸಂಘಟನೆ ಬೇಕಾಗಿದೆ. ಹೀಗಾಗಿ ಸಾಧು-ಸಂತರ ಸೂಚನೆಯಂತೆ ಒಂದು ಸಂಘಟನೆ ಕಟ್ಟಲು ತೀರ್ಮಾನ ಮಾಡಿದ್ದೇವೆ. ಈ ಸಂಘಟನೆಗೆ ಸಾಧು-ಸಂತರು ಬೆಂಬಲ ಕೊಡುತ್ತೇವೆ ಎಂದಿದ್ದಾರೆ. ಸಂಘಟನೆ ರಚನೆಯ ಅಂತಿಮ ನಿರ್ಣಯವನ್ನು ಬಾಗಲಕೋಟೆಯಲ್ಲಿ ಕೈಗೊಳ್ಳುತ್ತೇವೆ, ಎಂದು ಹೇಳಿದರು.
ಬಾಗಲಕೋಟೆ ಚರಂತಿ ಮಠ ಸಮುದಾಯ ಭವನದಲ್ಲಿ ಅಕ್ಟೋಬರ್ 20 ರಂದು ಕಾರ್ಯಕ್ರಮ ನಡೆಯಲಿದೆ. 30 ರಿಂದ 40 ಜನ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.ಬಾಗಲಕೋಟೆ ಸಭೆ ಬಳಿಕ ಅಂತೀಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಸಮಾಜದಲ್ಲಿ ಎಲ್ಲರಿಗೂ ಅನ್ಯಾಯ ಆಗುತ್ತಿದೆ. ಅನ್ಯಾಯದ ವಿರುದ್ಧ ಹೋರಾಟ ಮಾಡಲು ಸಂಘಟನೆ ಕಟ್ಟುತ್ತಿದ್ದೇವೆ. ರಾಣಿ ಚೆನ್ನಮ್ಮ ಬ್ರಿಗೇಡ್ ಮಾಡಲು ಸಲಹೆ ಬಂದಿದೆ. ನಮ್ಮ ಸಂಘಟನೆ ಅಲ್ಪ ಸಂಖ್ಯಾತರ ವಿರುದ್ಧ ಅಲ್ಲ. ಆದರೆ, ರಾಷ್ಟ್ರದ್ರೋಹಿ ಮುಸ್ಲಿಮರ ವಿರುದ್ಧವಾಗಿರುತ್ತದೆ ಎಂದರು.
ನಾನು ಮತ್ತೆ ಬಿಜೆಪಿ ಸೇರುವ ಕುರಿತು ಯೋಚಿಸಿಲ್ಲ, ಅಪ್ಪ ಮಕ್ಕಳು ಹೊಂದಾಣಿಕೆಯಿAದ ಬಿಜೆಪಿ ಮುಕ್ತಿಯಾಗಬೇಕು. ಬಿಜೆಪಿ ಶುದ್ದೀಕರಣವಾಗಬೇಕಿದೆ, ನನಗೆ ಸಮಾಧಾನ ಆದರೆ ಮಾತ್ರ ವಾಪಸ್ ಬಿಜೆಪಿ ಸೇರುತ್ತೇನೆ. ನನ್ನ ಮಗನಿಗೆ ಹಾವೇರಿಗೆ ಟಿಕೆಟ್ ಕೊಡಿಸುತ್ತೇನೆಂದು ಯಡಿಯೂರಪ್ಪ ಮೋಸ ಮಾಡಿದರು ಎಂದು ಆರೋಪ ಮಾಡಿದರು. ನಾನು ರಾಯಣ್ಣ ಬ್ರಿಗೇಡ್ ಕಟ್ಟಿದಾಗ, ಜನ ಬೆಂಬಲ ಸಿಕ್ಕಿತ್ತು. ಆದರೆ, ಬಿಎಸ್ ಯಡಿಯೂರಪ್ಪ ಅವರಿಗೆ ಸಹಿಸಿಕೊಳ್ಳಲು ಆಗದೆ ಅಮಿತ್ ಶಾ ಅವರಿಗೆ ದೂರು ಕೊಟ್ಟರು. ದೂರು ಕೊಡಲು ಕಾರಣವೇನೆಂದು ಯಡಿಯೂರಪ್ಪ ಅವರು ಕಾರಣ ಹೇಳಿಲ್ಲ. ಸಂಘಟನೆ ಬೇಡಾ ಅಂತ ಮಾತ್ರ ಹೇಳಿದರು ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಮಾಜಿ ಶಾಸಕ ರಘುಪತಿ ಭಟ್, ವೀರಭದ್ರಪ್ಪ ಹಾಲರವಿ ಸೇರಿ ಅನೇಕ ಮುಖಂಡರು ಉಪಸ್ಥಿತರಿದ್ದರು.






