ಕೂಡ್ಲಿಗಿ: ನಮ್ಮದು ತುಕ್ಡೇ ತುಕ್ಡೇ ಗ್ಯಾಂಗ್ ಎಂದಾದರೆ, ಮೋದಿಯವರ ಎನ್ಡಿಎ ಮೈತ್ರಿಕೂಟದಲ್ಲಿ 36 ಪಕ್ಷಗಳು ಇವೆ ಅಲ್ವಾ, ಅವರದ್ದು ಯಾವ ಗ್ಯಾಂಗ್? ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ತುಕ್ಡೇ ತುಕ್ಡೇ ಗ್ಯಾಂಗ್ ಎಂಬ ಪಿಎಂ ಮೋದಿ ಮಾತಿಗೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದರು. ಕಾಂಗ್ರೆಸ್ ಗ್ಯಾರಂಟಿಗಳನ್ನು ಕಾಪಿ ಮಾಡಿ, ಗ್ಯಾರಂಟಿ ಅಂತ ಬಿಜೆಪಿಯವರು ಕೂಡ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ನಮ್ಮ ನಾಯಕರೆಲ್ಲರೂ ಹೇಳಿದ್ರು, ಅದರಂತೆಯೇ ಬಿಜೆಪಿಯವರು ಕಾಪಿ ಮಾಡಿದ್ದಾರೆ ಎಂದರು
ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಗೆ ಗೋಬ್ಯಾಕ್ ಹೇಳಿರುವುದು ಸರಿಯಲ್ಲ:
ಬೆಂಗಳೂರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ವಿಚಾರದಲ್ಲಿ ನಾಸೀರ್ ಹುಸೇನ್ ಅವರದ್ದೇನೂ ತಪ್ಪಿಲ್ಲ. ಈ ಕುರಿತು ತನಿಖೆಯಾಗುತ್ತಿದೆ. ಈ ಸಮಯದಲ್ಲಿ ನಾಸಿರ್ ಅವರಿಗೆ ಬಳ್ಳಾರಿಯಲ್ಲಿ ಗೋ ಬ್ಯಾಕ್ ಹೇಳಿರುವುದು ಸರಿಯಲ್ಲ ಎಂದರು.
ನಾವು ಬಳ್ಳಾರಿಗೆ ಪ್ರಚಾರಕ್ಕೆ ಬಂದಿದ್ದೇವೆ, ನಮಗೆ ಕಾಂಗ್ರೆಸ್ ಪರ ವಾತಾವರಣವಿದೆ. ತುಕಾರಾಂ ಗೆಲ್ತಾರೆ ಅನ್ನೋ ನಿರೀಕ್ಷೆ ಇದೆ. ನಮಗೆ ಎಲ್ಲಿ ಸಮಯ ಸಿಗ್ತಿದೆಯೋ ಅಲ್ಲಿ ಪ್ರಚಾರ ಮಾಡ್ತಿದ್ದೇವೆ. ನಮ್ಮ ಅಧ್ಯಕ್ಷರು ಕೂಡ ಬರ್ತಾರೆ, ಸಿಎಂ ಸಿದ್ದರಾಮಯ್ಯ ಕೂಡ ಬರ್ತಾರೆ. ಪ್ರಚಾರ ಮಾಡ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಲೋಕಸಭೆ ಚುನಾವಣೆ ಬಳಿಕ ಸಿಎಂ ಬದಲಾಗುವ ಪ್ರಶ್ನೆಯೇ ಇಲ್ಲ:
ಸಿಎಂ ಸಿದ್ದರಾಮಯ್ಯ ಅವರಿಗೆ ಜನಾದೇಶವಿದೆ, ಬದಲಾವಣೆ ಸಾಧ್ಯವಿಲ್ಲ. ಹೈಕಮಾಂಡ್ ಅವರನ್ನು ಸಿಎಂ ಮಾಡಿದೆ, ಅವರಿಗೆ ಉತ್ತಮ ಮುಖ್ಯಮಂತ್ರಿ ಎಂಬ ಬಿರುದು ಕೂಡ ಇದೆ,ಆದ್ದರಿಂದ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಪ್ರಸ್ತಾಪವೇ ಹೈಕಮಾಂಡ್ ಮುಂದಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.