ಬೆಂಗಳೂರು: ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ವಿವಾದ ಮತ್ತೆ ಭುಗಿಲೆದ್ದಿದ್ದು , ನಕಲಿ ಪರಶುರಾಮ ಮೂರ್ತಿ ಎನ್ನುವ ದೂರಿನ ಹಿನ್ನೆಲೆಯಲ್ಲಿ ಈ ಪ್ರಕರಣದ ಕುರಿತು ಕಾರ್ಕಳ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಬೆಂಗಳೂರಿನ ಗೋಡೌನ್ನಲ್ಲಿ ಪರಶುರಾಮ ಮೂರ್ತಿಯ ಕುರಿತು ಪೊಲೀಸರು ಶನಿವಾರ ಸ್ಥಳ ಮಹಜರು ಮಾಡಿದ್ದಾರೆ.
ಬೆಂಗಳೂರಿಗೆ ಆಗಮಿಸಿದ ಕಾರ್ಕಳ ನಗರ ಠಾಣೆಯ ಪೊಲೀಸರ ತಂಡ ಬೆಂಗಳೂರಿನ ಕೆಂಗೇರಿ ಬಳಿಯ ಗೋಡೌನ್ನಲ್ಲಿ ಸ್ಥಳಮಹಜರು ನಡೆಸಿದ್ದಾರೆ. ಕೆಂಗೇರಿ ಬಳಿಯ ಗೋಡೌನ್ನಲ್ಲಿ ಸಂಗ್ರಹಿಸಿದ್ದ ಪ್ರತಿಮೆಗೆ ಬೇಕಾದ ವಸ್ತುಗಳು ಸೇರಿದಂತೆ ಪ್ರತಿಮೆ ನಿರ್ಮಾಣಕ್ಕೆ ಬಳಸಿದ್ದ ವಸ್ತುಗಳ ಪರಿಶೀಲನೆ ನಡೆಸಿದ್ದಾರೆ.
ಏನಿದು ವಿವಾದ?
ಕಳೆದ 2023ರಲ್ಲಿ ಜನವರಿಯಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ್ದ ಪರಶುರಾಮ ಥೀಮ್ ಪಾರ್ಕ್ ಚುನಾವಣೆ ಮುಗಿದ ಬಳಿಕ ಪರಶುರಾಮ ಮೂರ್ತಿ ನಕಲಿ ಎಂದು ಕಾಂಗ್ರೆಸ್ ಹಾಗೂ ಸಂಘಟನೆಯ ಕಾರ್ಯಕರ್ತರು ಈ ಕುರಿತು ತನಿಖೆ ಆಗಬೇಕೆಂದು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಅಂದಿನ ಸಚಿವ, ಹಾಲಿ ಶಾಸಕ ಸುನೀಲ್ ಕುಮಾರ್ ಅವರು ನಕಲಿ ಪರಶುರಾಮ ಪ್ರತಿಮೆ ಸ್ಥಾಪಿಸಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದರು.
ಇದಾದ ಬಳಿಕ ಪರಶುರಾಮ ಥೀಮ್ ಪಾರ್ಕಿಗೆ ಸಿಡಿಲು ನಿರೋಧಕ ಹಾಗೂ ಇತರೇ ಕಾಮಗಾರಿ ನಡೆಸುವುದಾಗಿ ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರವು ಸಾರ್ವಜನಿಕರ ಭೇಟಿ ನಿರ್ಬಂಧ ವಿಧಿಸಿ ಕಾಮಗಾರಿಗೆ ಮುಂದಾದಾಗ, ಇದು ನಕಲಿ ಪ್ರತಿಮೆ ಬದಲಿಸಲು ನಡೆಸುತ್ತಿರುವ ಹುನ್ನಾರ ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ತಡೆ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಈ ಪ್ರಕರಣದ ನಡುವೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ,ಎಂಎಲ್’ಸಿ ಮಂಜುನಾಥ ಭಂಡಾರಿ ಸಹಿತ ಕಾಂಗ್ರೆಸ್ ನಾಯಕರು ಥೀಮ್ ಪಾರ್ಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇತ್ತ ಕಾಂಗ್ರೆಸ್ ಗೆ ಟಕ್ಕರ್ ಕೊಡಲು ಬಿಜೆಪಿ ಕಾರ್ಯಕರ್ತರು ಪರಶುರಾಮ ಮೂರ್ತಿಯ ಅಸಲಿಯತ್ತು ಪರೀಕ್ಷೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಕೂಡ ಅಸಲಿಯತ್ತು ಪರೀಕ್ಷಿಸಲು ಹೋಗಿದ್ದರು.ಈ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ಧ ಸರ್ಕಾರಿ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎನ್ನುವ ದೂರಿನಡಿ ಪೊಲೀಸ್ ಠಾಣೆಯಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಈ ಕುರಿತು ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರ ಪರವಿರೋಧ ಹೇಳಿಕೆಗಳು ಚರ್ಚೆಗಳು ಕೂಡ ನಡೆದಿತ್ತು.
ಈ ಪ್ರಕರಣದ ತನಿಖೆಯಾಗಬೇಕು ಹಾಗೂ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಒದಗಿಸಬೇಕೆಂಬ ಹಠಕ್ಕೆ ಬಿದ್ದ ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಮೇಲೆ ಒತ್ತಡ ಹೇರಿದ ಬಳಿಕ ಸರ್ಕಾರದ ಸೂಚನೆಯಂತೆ ಮುಂದುವರಿದ ಕಾಮಗಾರಿ ಸ್ಥಗಿತಗೊಳಿಸಲು ಯಶಸ್ವಿಯಾಗಿದ್ದರು.
ಅಂತಿಮವಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.
ಇದೀಗ ಕಾರ್ಕಳ ಪೊಲೀಸರು ಶಿಲ್ಪಿ ಕೃಷ್ಣ ನಾಯಕ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು ಈ ಪ್ರಕರಣದಲ್ಲಿ ನನ್ನ ಮೇಲೆ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಇದೀಗ ಮತ್ತೆ ತನಿಖೆ ಚುರುಕಾಗಿದ್ದು ಈ ಪ್ರಕರಣ ಮತ್ತೆ ಯಾವ ತಿರುವು ಪಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ
`