ನವದೆಹಲಿ: ಅಬಕಾರಿ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿಯನ್ನು ಬಂಧಿಸಿ ಜೈಲುಗಟ್ಟಿರುವ ಇಡಿ ಕ್ರಮವನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ (AAP) ನಾಯಕರು ಮತ್ತು ಕಾರ್ಯಕರ್ತರು ಇಂದು ಸಾಮೂಹಿಕ ಉಪವಾಸ ಆಚರಿಸಲಿದ್ದಾರೆ. ದೇಶ ಹಾಗೂ ವಿದೇಶಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಬೆಂಬಲಿಗರು ಪಕ್ಷದ ‘ಸಾಮುಹಿಕ್ ಉಪವಾಸದಲ್ಲಿ ಭಾಗವಹಿಸಲಿದ್ದಾರೆ. “ಜನರು ತಮ್ಮ ಮನೆಗಳಲ್ಲಿ ಉಪವಾಸ ಆಚರಿಸಿ, ದೆಹಲಿ ಮುಖ್ಯಮಂತ್ರಿಯನ್ನು ಬೆಂಬಲಿಸಬಹುದು ಎಂದು ಎಎಪಿ ನಾಯಕ ಗೋಪಾಲ್ ರೈ ಹೇಳಿದ್ದಾರೆ.
ಎಎಪಿಯ ಎಲ್ಲಾ ಶಾಸಕರು, ಪದಾಧಿಕಾರಿಗಳು ಜಂತರ್ ಮಂತರ್ನಲ್ಲಿ ಬೆಳಗ್ಗೆ ಸಾಮೂಹಿಕ ಉಪವಾಸ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳಕ್ಕೆ ತೆರಳುವ ರಸ್ತೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಭಾರೀ ಬ್ಯಾರಿಕೇಡಿಂಗ್ನಿಂದಾಗಿ ಮಧ್ಯ ದೆಹಲಿಯ ಕೆಲವು ಭಾಗಗಳಲ್ಲಿ ಸಂಚಾರಕ್ಕೆ ತೊಂದರೆಯಾಗಬಹುದು. ಎಎಪಿ ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ‘ಘೇರಾವ್’ ಕರೆ ನೀಡಿತ್ತು. ಪ್ರತಿಭಟನೆಯ ಸಮಯದಲ್ಲಿ ಹಲವಾರು ಎಎಪಿ ನಾಯಕರು ಮತ್ತು ಕಾರ್ಯಕರ್ತರನ್ನು ಬಸ್ ಗಳಲ್ಲಿ ರಾಷ್ಟ್ರ ರಾಜಧಾನಿಯ ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ಯುಲಾಗಿತ್ತು.
ಕಳೆದ ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟ ಮೆಗಾ ರ್ಯಾಲಿ ಆಯೋಜನೆ ಮೂಲಕ ಬೃಹತ್ ಶಕ್ತಿ ಪ್ರದರ್ಶನ ನಡೆಸಿತ್ತು. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಪ್ರತಿಪಕ್ಷಗಳನ್ನು ನಾಶಮಾಡುತ್ತಿದೆ ಎಂದು ಆರೋಪಿಸಿತ್ತು. ಕೇಜ್ರಿವಾಲ್ ಅವರನ್ನು ಆಪಾದಿತ ಮದ್ಯ ನೀತಿ ಹಗರಣದಲ್ಲಿ ಮಾರ್ಚ್ 21 ರಂದು ಬಂಧಿಸಲಾಗಿತ್ತು.ಇವರ ವಿರುದ್ಧ ಇಡಿ ಕೋರ್ಟಿಗೆ ದಾಖಲೆ ಸಲ್ಲಿಸಿದೆ





