ಕಾರ್ಕಳ: ಕಾಲುಜಾರಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಶುಕ್ರವಾರ (ಮೇ.23) ನಡೆದಿದೆ. ಶಿರ್ಲಾಲು ಗ್ರಾಮದ ಹಾಡಿಯಂಗಡಿ ನಿವಾಸಿ ಶೇಖರ (64) ಮೃತಪಟ್ಟವರು.
ಶೇಖರ ಅವರು ತನ್ನ ಪತ್ನಿ ಮೃತಪಟ್ಟ ಬಳಿಕ ಕಳೆದ 1 ವರ್ಷದಿಂದ ಶಿರ್ಲಾಲು ಹಾಡಿಯಂಗಡಿಯ ತನ್ನ ಸಹೋದರನ ಮನೆಯಲ್ಲಿ ವಾಸವಿದ್ದರು. ಅವರು ಏ.29 ರಂದು ಹಾಲು ತರಲು ಮನೆಯ ಸಮೀಪದ ಅಂಗಡಿಗೆ ಹೋಗುವ ವೇಳೆಗೆ ಕಾಲುಜಾರಿ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿದ್ದರು. ಅವರಿಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಉಡುಪಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೂ ಗುಣಮುಖರಾಗದ ಹಿನ್ನಲೆಯಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿಯೂ ಚಿಕಿತ್ಸೆ ಫಲಿಸದೆ ಅವರು ಶುಕ್ರವಾರ ಮೃತಪಟ್ಟಿದ್ದಾರೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.