ಕಾರ್ಕಳ: ಬುಧವಾರ ರಾತ್ರಿಯಿಡೀ ಸುರಿದ ಭಾರೀಮಳೆಗೆ ಕಾರ್ಕಳ ತಾಲೂಕಿನ ಹಲವೆಡೆ ತಗ್ಗುಪ್ರದೇಶಗಳಿಗೆ ನೆರೆನೀರು ನುಗ್ಗಿ ಭಾರೀ ಆವಾಂತರ ಸೃಷ್ಟಿಯಾಗಿದೆ. ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಎಣ್ಣೆಹೊಳೆ ಪೇಟೆಯನ್ನು ಹಾದುಹೋಗಿರುವ ಸ್ವರ್ಣಾನದಿ ಭಾರೀ ಮಳೆಗೆ ಬುಧವಾರ ತಡರಾತ್ರಿ ಉಕ್ಕಿಹರಿದ ಪರಿಣಾಮ ಎಣ್ಣೆಹೊಳೆ ಪೇಟೆ ಜಲಾವೃತವಾಯಿತು. ರಾಜ್ಯ ಹೆದ್ದಾರಿಗೆ 3 ಅಡಿಯಷ್ಟು ಪ್ರವಾಹದ ನೀರು ನುಗ್ಗಿದ ಪರಿಣಾಮ ವಾಹನ ಸಂಚಾರಕ್ಕೆ ತೊಡಕಾಯಿತು.
ಪ್ರವಾಹದಿಂದ ಮೊಬೈಲ್ ಟವರ್ ಹಾಗೂ ಅಂಗಡಿಗಳು ಭಾಗಶಃ ಮುಳುಗಡೆಯಾಗಿದ್ದು, ತಕ್ಷಣವೇ ಸಾಮಾಗ್ರಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.
ಪ್ರವಾಹಪೀಡಿತ ಸ್ಥಳಕ್ಕೆ ಉಪತಹಸೀಲ್ದಾರ್ ಮಂಜುನಾಥ ನಾಯಕ್, ಗ್ರಾಮ ಸಹಾಯಕ ಉದಯ ನಾಯ್ಕ್ ಮುಂತಾದವರು ನೆರೆ ಪರಿಸ್ಥಿತಿಯನ್ನು ಅವಲೋಕಿಸಿದರು.
`