Share this news

ಉತ್ತರ ಪ್ರದೇಶ:  ಧಾರ್ಮಿಕ ಸಭೆಯೊಂದರ ವೇಳೆ ಕಂಡು ಕೇಳರಿಯದ ಕಾಲ್ತುಳಿತ ಸಂಭವಿಸಿ 120 ಜನ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಹಾಥ್ರಸ್‌ ಬಳಿಯ ಪುಲ್ರೈ ಎಂಬ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಉತ್ತರ ಪ್ರದೇಶದ ಎಟಾ ಮೂಲದವರಾದ ಭೋಲೆ ಬಾಬಾ ಅಲಿಯಾಸ್‌ ನಾರಾಯಣ ಸಾಕರ್ ಹರಿ ಅವರು ‘ಭೋಲೆ ಸತ್ಸಂಗ’ ಹೆಸರಿನ ಧಾರ್ಮಿಕ ಸಭೆ ಏರ್ಪಡಿಸಿದ್ದರು. ಸಭೆಗೆ ಮಿತಿಮೀರಿ ಜನರು ಸೇರಿದ್ದರು. ಸಭೆ ಮುಗಿಸಿ ವಾಪಸು ತೆರಳುವಾಗ ಜನರು ಮೋರಿಯೊಂದರ ಮೇಲೆ ನಿರ್ಮಿಸಲಾದ ಕಿರು ಸೇತುವೆ ಮೇಲೆ ಸಾಗಬೇಕಿತ್ತು. ಆಗ ಜನದಟ್ಟಣೆ ಕಾರಣ ಕಿರು ಸೇತುವೆ ಮೇಲೆ ನೂಕುನುಗ್ಗಲು ಉಂಟಾಗಿ ಮಕ್ಕಳು, ಮಹಿಳೆಯರು ಸೇರಿ ಅನೇಕ ಜನರು ಒಬ್ಬರ ಮೇಲೊಬ್ಬರು ಬಿದ್ದು ಪ್ರಾಣ ಬಿಟ್ಟರು ಎನ್ನಲಾಗಿದೆ.

ಇನ್ನೊಬ್ಬರ ಪ್ರಕಾರ, ಕೆಲವರು ಭೋಲೆ ಬಾಬಾ ಅವರನ್ನು ಹತ್ತಿರದಿಂದ ನೋಡಿ ಅವರು ಪಾದ ಇಟ್ಟ ಸ್ಥಳದ ಪಾದ ಧೂಳಿಯನ್ನು ಸಂಗ್ರಹಿಸಲು ಮುಗಿಬಿದ್ದರು. ಆಗ ನೂಕುನುಗ್ಗಲು ಉಂಟಾಗಿದೆ. ಜಿಲ್ಲಾಡಳಿತ ನೀಡಿದ ಅನುಮತಿಯ ಮಿತಿ ಮೀರಿ ಜನರನ್ನು ಸೇರಿಸಲಾಗಿತ್ತು. ಹೀಗಾಗಿ ಸ್ಥಳದಲ್ಲಿ ಉಸಿರುಕಟ್ಟುವ ವಾತಾವರಣ ಉಂಟಾಗಿತ್ತು ಎನ್ನಲಾಗಿದೆ.

ಆಗ್ರಾ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಅಲಿಗಢದ ವಿಭಾಗೀಯ ಆಯುಕ್ತರನ್ನು ಒಳಗೊಂಡ ತಂಡವು ಘಟನೆಯ ತನಿಖೆ ನಡೆಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ. ಘಟನಾ ಸ್ಥಳಕ್ಕೆ ಬುಧವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭೇಟಿ ನೀಡಲಿದ್ದಾರೆ.

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿದೆ. ಯುಪಿ ಸರ್ಕಾರವು ಎಲ್ಲಾ ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವಲ್ಲಿ ತೊಡಗಿದೆ. ಇದರಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಂಡವರಿಗೆ ನನ್ನ ಸಹಾನುಭೂತಿ ಇದೆ. ಇನ್ನು ಎಲ್ಲಾ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಮೃತರ ಕುಟಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.

                        

                          

                        

                          

 

Leave a Reply

Your email address will not be published. Required fields are marked *