ಗದಗ: ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ತಮ್ಮ ವಿರೋಧಿಗಳ ವಿರುದ್ಧ ಬಾಯಿಗೆ ಬಂ ಬೊಗಳುವ ಚಾಳಿ ಹೆಚ್ಚುತ್ತಲೇ ಇದೆ. ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ ರಾಜ್ಯಪಾಲರನ್ನು ಬಾಂಗ್ಲಾದೇಶದ ಪ್ರಧಾನಿಯಂತೆ ರಾಜಭನವದಿಂದ ಓಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಮಂಗಳೂರಿನ ಎಂಎಲ್ಸಿ ಐವನ್ ಡಿಸೋಜಾ ತನ್ನ ನಾಲಗೆ ಹರಿಬಿಟ್ಟ ಬೆನ್ನಲ್ಲೇ ಇದೀಗ ಗದಗ ಕಾಂಗ್ರೆಸ್ ಶಾಸಕ ಜಿ.ಎಸ್ ಪಾಟೀಲ್ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗಜೇಂದ್ರಗಢದಲ್ಲಿ ನಡೆದ ಅಹಿಂದ ಸಮಾವೇಶದಲ್ಲಿ ಮಾತನಾಡಿದ ಶಾಸಕ ಜಿ.ಎಸ್.ಪಾಟೀಲ್, ಬಾಂಗ್ಲಾ ದೇಶದಲ್ಲಿ ಜನರು ಪ್ರಧಾನಿ ಮನೆಗೆ ನುಗ್ಗಿ ಹೇಗೆ ಆಕ್ರೋಶ ವ್ಯಕ್ತಪಡಿಸಿದರೋ, ಹಾಗೇ ನಮ್ಮ ದೇಶದಲ್ಲಿಯೂ ಪ್ರಧಾನಿ ಮನೆಗೆ ನುಗ್ಗುವ ದಿನಗಳು ದೂರವಿಲ್ಲ ಎಂದು ಹೇಳುವ ಮೂಲಕ ಅರಾಜಕತೆ ಸೃಷ್ಟಿಸಲು ಪ್ರಚೋದನೆ ನೀಡುವ ಮೂಲಕ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರನ್ನು ಟೀಕಿಸುವ ಭರದಲ್ಲಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಜಿ.ಎಸ್.ಪಾಟೀಲ್ ಮಾತನಾಡಿ, ನಾವೆಲ್ಲರೂ ಒಂದಾಗಬೇಕು, ಧ್ವನಿಗಟ್ಟಿಗೊಳಿಸಿ ಹೋರಾಟ ನಡೆಸಬೇಕು. ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಇದರ ವಿರುದ್ಧ ಅಹಿಂದ ವರ್ಗದ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕೆಂದರು.
ಆವೇಶದ ಭರದಲ್ಲಿ ಶಾಸಕ ಜಿ.ಎಸ್ ಪಾಟೀಲ್ ನೀಡಿರುವ ಹೇಳಿಕೆ ಅವರಿಗೆ ಮುಳುವಾಗುವ ಸಾಧ್ಯತೆಗಳಿದ್ದು, ಈ ಹೇಳಿಕೆ ಬೆನ್ನಲ್ಲೇ ಬಿಜೆಪಿ ಕೆರಳಿ ಕೆಂಡವಾಗಿದೆ.
`