ಉಡುಪಿ: ಕನ್ನಡಿಗರ ಸಮಗ್ರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎ.26 ರಂದು ರಾಜ್ಯಾದ್ಯಂತ ಈಡುಗಾಯಿ ಒಡೆಯುವ ಚಳುವಳಿ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರಕಾರವು ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಮೂಲಕ, ರಾಜಧಾನಿ ಬೆಂಗಳೂರನ್ನು ಏಳು ಭಾಗಗಳಾಗಿ ವಿಭಜನೆ ಮಾಡಲು ಮುಂದಾಗಿರುವುದನ್ನು ಖಂಡಿಸಿ, ಕನ್ನಡಿಗರಿಗೆ ರಾಜ್ಯದಲ್ಲಿ ಉದ್ಯೋಗಾವಕಾಶ, ಮಹದಾಯಿ ಯೋಜನೆ, ಕಾಸರಗೋಡು ಕನ್ನಡ ಉಳಿಸುವ ಬೇಡಿಕೆ ಸಹಿತ ರಾಜ್ಯದ ಸಮಗ್ರ ಬೇಡಿಕೆಗಳನ್ನು ಈಡೇರಿಸುವ ಉದ್ದೇಶ ಈ ಚಳುವಳಿಯದ್ದು ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ತಿಳಿಸಿದರು.
ಇಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕರಾವಳಿಗರು ಹೋರಾಟದ ಬಗ್ಗೆ ಮತ್ತಷ್ಟು ಜಾಗ್ರತರಾಗಬೇಕು. ಕರಾವಳಿ ಭಾಗದಲ್ಲಿಯೂ ಮುಂದಿನ ದಿನದಲ್ಲಿ ವಿನೂತನ ಚಳುವಳಿ ಮಾಡಲಾಗುವುದು. ಕಾಸರಗೋಡು ಕನ್ನಡಿಗರಿಗಾಗಿ ಗಡಿಭಾಗ ಬಂದ್ ಮಾಡುವ ನಿಟ್ಟಿನಲ್ಲಿಯೂ ಮುಂದೆ ಚಳುವಳಿ ಮಾಡಲಾಗುವುದು ಎಂದರು.
ಕನ್ನಡಪರ ಸಂಘಟನೆಗಳಿಂದ ರಾಜ್ಯದಲ್ಲಿ ಕನ್ನಡಕ್ಕೆ ಶಕ್ತಿ ಬಂದಿದೆ. ಕರಾವಳಿ ಜಿಲ್ಲೆಯ ಪರ, ಬೇಡಿಯ ಪರವೂ ಮುಂದಿನ ದಿನದಲ್ಲಿ ಹೋರಾಟ ನಡೆಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಚಂದನ್ ವಾಟಾಳ್ ಉಪಸ್ಥಿತರಿದ್ದರು.