ಉಡುಪಿ: ಅಮವಾಸ್ಯೆಯ ದಿನದಂದು ಸಮುದ್ರಕ್ಕೆ ಸ್ನಾನ ಮಾಡಲು ತೆರಳಿದ ಇಬ್ಬರು ಸಮುದ್ರಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಸಮುದ್ರ ತೀರದಲ್ಲಿ ನಡೆದಿದೆ.
ಎಳ್ಳಮಾವಾಸ್ಯೆ ಪ್ರಯುಕ್ತ ಹೆಜಮಾಡಿ ಸಮುದ್ರಕ್ಕೆ ತೀರ್ಥ ಸ್ನಾನ ಮಾಡಲೆಂದು ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು, ಈಜಲು ತೆರಳಿದ್ದ 6 ಜನರ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಕಾಪು ತಾಲೂಕಿನ ಹೆಜಮಾಡಿಯ ಅಕ್ಷಯ್ ಮತ್ತು ಚಿರಾಗ್ ಅಮೀನ್ ಎಂಬ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಸಮುದ್ರದಲ್ಲಿ ಮುಳುಗುತ್ತಿದ್ದ 6 ಜನರ ಪೈಕಿ ನಾಲ್ವರನ್ನು ರಕ್ಷಣೆ ಮಾಡಲಾಗಿದ್ದು, ಇನ್ನುಳಿದ ಇಬ್ಬರನ್ನು ರಕ್ಷಿಸಲು ಯತ್ನಿಸಿದರೂ ಆ ಪ್ರಯತ್ನ ಫಲಪ್ರದವಾಗಲಿಲ್ಲ. ಸ್ಥಳೀಯರು ಕಾಪಾಡಿದ ನಾಲ್ವರು ಯುವಕರು ನೀರು ಕುಡಿದು ಅಸ್ವಸ್ಥರಾಗಿದ್ದರಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಡುಬಿದ್ರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.