ಕೊಲ್ಕತ್ತಾ : ಕೊಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ.ತಾನು ಮಂಗಳವಾರ ನ್ಯಾಯಾಧೀಶ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಭಾನುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ
ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ರಾಜಕೀಯ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದು,ಅವರ ನಿರ್ಧಾರ ಭಾರೀ ಕುತೂಹಲಕ್ಕೆ ಎಡೆಮಾಡಿದೆ. ನೇಮಕಾತಿಯಲ್ಲಿ ಭ್ರಷ್ಟಾಚಾರ ಎಸಗಿದ ಪ್ರಕರಣದಲ್ಲಿ ನ್ಯಾ.ಗಂಗೋಪಾಧ್ಯಾಯ ಸಾಕಷ್ಟು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಇದಲ್ಲದೇ ಅವರು ಹಲವಾರು ಪ್ರಕರಣಗಳನ್ನು ಸಿಬಿಐ ತನಿಖೆಗೆ ಆದೇಶಿಸಿದ್ದರು.ಮುಂದಿನ ಆಗಸ್ಟ್ ನಲ್ಲಿ ಅವರು ಸೇವಾ ನಿವೃತ್ತರಾಗಬೇಕಿತ್ತು, ಆದರೆ ಅದಕ್ಕೂ ಮುನ್ನವೇ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದಾರೆ .ತನ್ನ ರಾಜೀನಾಮೆಯನ್ನು ರಾಷ್ಟ್ರಪತಿ ಮತ್ತು ಮುಖ್ಯ ನ್ಯಾಯಮೂರ್ತಿಗೆ ಕಳುಹಿಸಲಿದ್ದಾರೆ ಎನ್ನಲಾಗಿದೆ. ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ನ್ಯಾಯಾಲಯದಲ್ಲಿದ್ದಾಗ ಟಿಎಂಸಿಯಿಂದ ಹಲವಾರು ಬಾರಿ ವಿವಿಧ ನಿಂದನೆಗಳನ್ನು ಎದುರಿಸಬೇಕಾಯಿತು ಎಂದು ದೂರಿದ್ದಾರೆ.
ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು, “ನಾನು ಮಂಗಳವಾರ ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ನಾಳೆ ನ್ಯಾಯಾಧೀಶನಾಗಿ ನನ್ನ ಕೊನೆಯ ದಿನ. ಆ ದಿನ ನಾನು ಯಾವುದೇ ನ್ಯಾಯದ ಕೆಲಸ ಮಾಡುವುದಿಲ್ಲ ನಾವು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮೌಖಿಕವಾಗಿ ತಿಳಿಸುತ್ತೇವೆ. ನಾನು ಮಂಗಳವಾರ ನಮ್ಮ ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ. ನನ್ನ ರಾಜೀನಾಮೆ ಪತ್ರವು ಪೋಸ್ಟ್ ಮಾಡಿದ ಕ್ಷಣದಿಂದ ಜಾರಿಗೆ ಬರಲಿದೆ. ಇದು ಭಾರತದ ಸಂವಿಧಾನ ಮತ್ತು ಸಂವಿಧಾನದ ನಿಬಂಧನೆಯಾಗಿದೆ. ನಾನು ಮಂಗಳವಾರ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.