Share this news

ಕಾರ್ಕಳ:ಗ್ರಾಮೀಣ ಮಟ್ಟದಲ್ಲಿನ‌ ಯುವಜನತೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಡಿಜಿಟಲ್ ಲೈಬ್ರರಿಗಳನ್ನು ಒದಗಿಸಿದೆ.ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವ ಅಭ್ಯಾಸ ಕಡಿಮೆಯಾದ ಹಿನ್ನೆಲೆಯಲ್ಲಿ ಸರ್ಕಾರಗಳು ಡಿಜಿಟಲ್ ಪುಸ್ತಕಗಳು ಹಾಗೂ ಗ್ರಂಥಗಳಿಗೆ ಹೆಚ್ಚಿನ ಒತ್ತು ನೀಡಿವೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಗುರುವಾರ ಮರ್ಣೆ ಗ್ರಾಮ ಪಂಚಾಯತಿಯ ನೂತನ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಬಳಿಕ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಕಾರ್ಕಳ ತಾಲೂಕು ಮುಂಚೂಣಿಯಲ್ಲಿದೆ, ಕಾರ್ಕಳದಲ್ಲಿ ಆದಷ್ಟು ರಸ್ತೆಗಳ ಅಭಿವೃದ್ಧಿ ಉಡುಪಿ ಜಿಲ್ಲೆಯ ಯಾವುದೇ ತಾಲೂಕಿನಲ್ಲೂ ಆಗಿಲ್ಲ. ರಸ್ತೆಗಳ ಅಭಿವೃದ್ಧಿ ನಿರಂತರ ಪ್ರಕ್ರಿಯೆ. ಸರ್ಕಾರ ಕಳೆದ ಒಂದು ವರ್ಷದ ಅವಧಿಯಲ್ಲಿ ಯಾವುದೇ ಅನುದಾನ ಬಿಡುಗಡೆಗೊಳಿಸಿಲ್ಲ ಆದ್ದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ ಎಂದರು. ವಸತಿ ಯೋಜನೆಯ ಕುರಿತು ಮಾತನಾಡಿದ ಶಾಸಕ‌ ಸುನಿಲ್ ಕುಮಾರ್, ವಸತಿ ಸಮಸ್ಯೆ ರಾಜ್ಯಮಟ್ಟದ ಸಮಸ್ಯೆಯಾಗಿದೆ ,ಈ ಬಾರಿ ವಸತಿ ಯೋಜನೆಗೆ ಅನುದಾನ ಮೀಸಲಿರಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದ್ದು ಆದ್ಯತೆ ನೆಲೆಯಲ್ಲಿ ಬಡವರಿಗೆ ಸೂರು ಕಲ್ಪಿಸಲಾಗುತ್ತದೆ ಎಂದರು.
ಇದಲ್ಲದೇ ರಸ್ತೆ ಅಭಿವೃದ್ಧಿ ಕುರಿತ ಮನವಿಗೆ ಸ್ಪಂದಿಸಿದ ಸುನಿಲ್ ಕುಮಾರ್, ದೆಪ್ಪುತ್ತೆ ಹಾಗೂ ಹೆರ್ಮುಂಡೆ ರಸ್ತೆ ಅಭಿವೃದ್ಧಿಗೆ ಆದ್ಯತೆ ಮೇರೆಗೆ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ಸಬ್ ಸ್ಟೇಷನ್ ಗಳ ನಿರ್ಮಾಣ, ಕುಡಿಯುವ ನೀರಿಗಾಗಿ ಕೇಂದ್ರ ಸರ್ಕಾರದ ವರಾಹಿ ಯೋಜನೆಯಿಂದ ಜಲಜೀವನ್ ಮಿಷನ್ ಮೂಲಕ ಮನೆಮನೆಗೆ ಕುಡಿಯುವ ನೀರು ಒದಗಿಸಲಾಗುತ್ತದೆ. ಪರಿಶಿಷ್ಟ ಜಾತಿ ವರ್ಗ ಕಾಲೋನಿಗಳ ರಸ್ತೆ ಅಭಿವೃದ್ಧಿಗೆ ಮನವಿ‌ ಬಂದರೂ, ಸರ್ಕಾರ ಇದಕ್ಕಾಗಿ ಪ್ರತ್ಯೇಕ ಅನುದಾನ ನೀಡುತ್ತಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ಸರ್ಕಾರದ ಗಮನ‌ ಸೆಳೆಯಲಾಗುತ್ತದೆ ಎಂದರು.

ಮರ್ಣೆ ಪಂಚಾಯತ್ ಅಧ್ಯಕ್ಷೆ ಪ್ರಭಾವತಿ ನಾಯಕ್, ಉಪಾಧ್ಯಕ್ಷೆ ಮೇರಿ ಮಸ್ಕರೇನ್ಹಸ್, ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ವಿಜಯಾ,ತಹಸೀಲ್ದಾರ್ ‌ಪ್ರತಿಭಾ ಉಪಸ್ಥಿತರಿದ್ದರು. ಪಿಡಿಓ ತಿಲಕ್’ರಾಜ್ ಸ್ವಾಗತಿಸಿ,ಗುರು ಪ್ರಸಾದ್ ರಾವ್ ವಂದಿಸಿದರು. ಪಂಚಾಯತ್ ಸದಸ್ಯ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

                        

                          

                        

                          

 

`

Leave a Reply

Your email address will not be published. Required fields are marked *