ಕಾರ್ಕಳ:ಕಳೆದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಸುನಿಲ್ ಕುಮಾರ್ ಇದನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ಪ್ರಚಾರ ಪಡೆದಿದ್ದರು. ಆದರೆ ಪ್ರಸ್ತಾವಿತ ಜವಳಿ ಪಾರ್ಕಿಗೆ ಸರಕಾರದಿಂದ ಅನುದಾನವೇ ಬಿಡುಗಡೆಯಾಗಿಲ್ಲ ಎನ್ನುವ ಮಾಹಿತಿ ವಿಧಾನಸಭೆ ಕಲಾಪದ ವೇಳೆ ಬಹಿರಂಗವಾಗಿದೆ.ಆದ್ದರಿಂದ ಕಾರ್ಕಳ ಕ್ಷೇತದ ಜನತೆಗೆ ಜವಳಿ ಪಾರ್ಕ್ ಸ್ಥಾಪಿಸುವುದಾಗಿ ಸುಳ್ಳು ಹೇಳಿದ ಶಾಸಕರು ಕ್ಷಮೆಯಾಚಿಸಬೇಕೆಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಹಾಗೂ ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ.
ಉದ್ಯೋಗ ಸೃಷ್ಟಿ ಮತ್ತು ಊರಿನ ಅಭಿವೃದ್ಧಿಯಾಗುವು ನಿಟ್ಟಿನಲ್ಲಿ ಕಾರ್ಕಳದಲ್ಲಿ ಜವಳಿ ಪಾರ್ಕ್ ಸ್ಥಾಪನೆಯನ್ನು ನಾವು ಸ್ವಾಗತಿಸುತ್ತೇವೆ,ಆದರೆ ಅನುದಾನವೇ ಬಿಡುಗಡೆಯಾಗದೆ ಸುಳ್ಳು ಹೇಳಿ ಗುದ್ದಲಿ ಪೂಜೆ ನೆರವೇರಿಸಿದ್ದು, ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗದ ಹುಸಿ ಭರವಸೆ ನೀಡಿದ್ದು ಕ್ಷೇತ್ರದ ಜನತೆಗೆ ಮಾಡಿದ ಮೋಸವಲ್ಲವೆ? ಇದರ ಉದ್ದೇಶ ಕೇವಲ ಚುನಾವಣೆಯ ಗಿಮಿಕ್ ಅಲ್ಲದೇ ಮತ್ತಿನ್ನೇನು ಎಂದು ಪ್ರಶ್ನಿಸಿದ್ದಾರೆ.
ಜವಳಿ ಪಾರ್ಕ್ ನಿರ್ಮಾಣಕ್ಕೆ ಬೇಕಾಗುವಷ್ಟು ಜಮೀನು ಗುರುತಿಸಲು ವಿಳಂಬವಾದ ಕಾರಣ ಸಮಸ್ಯೆ ಉಂಟಾಯಿತು ಎಂದು ವಿಧಾನಸಭಾ ಕಲಾಪದಲ್ಲಿ ತಾವೇ ಒಪ್ಪಿಕೊಂಡಿದ್ದೀರಿ, ಸಚಿವರು ಕೂಡ ಈ ಬಗ್ಗೆ ಸ್ಫಷ್ಟ ಉತ್ತರ ನೀಡಿ ಸತ್ಯ ಏನೆಂದು ಬಹಿರಂಗ ಪಡಿಸಿದ್ದಾರೆ ಹಾಗಾಗಿ ಇನ್ನೂ ನೂತನ ಸರಕಾರದ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಿದರೆ ಏನು ಪ್ರಯೋಜನವಿಲ್ಲ. ತಾವು ಸಚಿವನಾಗಿದ್ದರೂ ಅನುದಾನ ಒದಗಿಸಲಾಗದೇ ಲ ಸುಳ್ಳು ಹೇಳಿದ್ದೀರಿ ಆದ್ದರಿಂದ ಕ್ಷೇತ್ರದ ಜನರ ಕ್ಷಮೆಯಾಚಿಸಬೇಕೆಂದು ಶುಭದರಾವ್ ಆಗ್ರಹಿಸಿದ್ದಾರೆ.