ನವದೆಹಲಿ : ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ ಎಂದು ಸದನದ ಅಧ್ಯಕ್ಷ ಮತ್ತು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಇಂದು ಘೋಷಿಸಿದ್ದಾರೆ.
ಡೆರೆಕ್ ಒ’ಬ್ರಿಯಾನ್ ಅವರು ದಿಲ್ಲಿ ಸೇವೆಗಳ ಮಸೂದೆಯ ಮೇಲಿನ ಬಿಸಿಬಿಸಿ ಚರ್ಚೆಯ ಸಂದರ್ಭದಲ್ಲಿ ಪ್ರಚಾರವನ್ನು ಪಡೆಯಲು ಸದನದಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ಸೋಮವಾರ ಧನ್ಕರ್ ಆರೋಪಿಸಿದ್ದರು. ಟಿಎಂಸಿ ಸದಸ್ಯ ಒ’ಬ್ರಿಯಾನ್ ತಮ್ಮ ಭಾಷಣವನ್ನು ದಿಲ್ಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆ 2023 ಕ್ಕೆ ಸೀಮಿತಗೊಳಿಸಲು ನಿರಾಕರಿಸಿ ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದ ನಂತರ ಧನ್ಕರ್ ಆಕ್ರೋಶಗೊಂಡಿದ್ದರು.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಇಂದು ಒ’ಬ್ರಿಯಾನ್ ಅವರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಮಂಡಿಸುವ ಮೊದಲು ಸಭಾಧ್ಯಕ್ಷರು ಹಾಗೂ ಒ’ಬ್ರಿಯಾನ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ರಾಜ್ಯಸಭೆ ಮತ್ತು ಲೋಕಸಭೆ ಎರಡೂ ಕಲಾಪಗಳನ್ನು ಇಂದು ಮಧ್ಯಾಹ್ನದ ವರೆಗೆ ಮುಂದೂಡಲಾಗಿದೆ.